ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಆಡಿಯೋ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸಾಧ್ಯವಿಲ್ಲ, ವಿಶೇಷ ತನಿಖಾ ದಳವೇ ತನಿಖೆ ನಡೆಸಲಿ ಎಂದು ವಿಧಾನಸಭಾಧ್ಯಕ್ಷ ರಮೇಶ ಕುಮಾರ ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಂಗ ತನಿಖೆ ಬಹಳ ವಿಳಂಬವಾಗಲಿದೆ. ಇದರಲ್ಲಿರುವ ಆರೋಪಗಳು ಕ್ರಿಮಿನಲ್ ಸ್ವರೂಪ ಹೊಂದಿದೆ. ಶಿಕ್ಷೆ ನೀಡಲು ನ್ಯಾಯಾಂಗ ತನಿಖಾಧಿಕಾರಿಗಳಿಗೆ ಅವಕಾಶ ಇರುವುದಿಲ್ಲ. ಮಾತನಾಡಿದವರು ಸದನಕ್ಕೆ ಸೇರಿದವರೇ ಆಗಿದ್ದರೆ ನ್ಯಾಯಾಂಗ ತನಿಖೆ ನಡೆಸಲು ಬರುವುದಿಲ್ಲ. ಎಸ್ಐಟಿ ತನಿಖೆ ನಡೆದರೆ ತಪ್ಪಿತಸ್ಥರೆಂದು ಕಂಡುಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ರಮೇಶ ಕುಮಾರ ಹೇಳಿದರು.
ಮುಖ್ಯಮಂತ್ರಿ ವಿರುದ್ಧವೇ ಆರೋಪ ಇರುವಾಗ ಅವರ ಅಧೀನದಲ್ಲಿರುವ ಎಸ್ಐಟಿಯನ್ನು ಹೇಗೆ ನಂಬಲು ಸಾಧ್ಯ ಎಂಬ ವಿರೋಧಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರನ್ನು ಬೇಕಾದರೂ ಈ ದೇಶದಲ್ಲಿ ಪ್ರಭಾವಿಸಬಹುದು. ವಾದಕ್ಕೆ ಅರ್ಥವೇ ಇರುವುದಿಲ್ಲ. ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರ, ಆಡಳಿತ, ನ್ಯಾಯಾಂಗ ಎಲ್ಲವೂ ಬೇರೆ. ಐಎಎಸ್, ಐಪಿಎಸ್ ಮಾಡಿಕೊಂಡು ಬಂದವರಿಗೆ ಏನು ಮಾಡಬೇಕು ಮಾಡಬಾರದು ಎಂದು ಗೊತ್ತಿದೆ. ನನ್ನ ಹೆಸರು ಅದರಲ್ಲಿ ಬಂದಿದೆ. ನನಗೆ ಅದರಿಂದ ಬಿಡುಗಡೆ ನೀಡಲಿ ಎಂದು ಹೇಳಿದರು.
ಈ ವಿಷಯ ಕುರಿತು ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಂಗಳವಾರ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬುಧವಾರ ಸಭಾಧ್ಯಕ್ಷರು ಆಡಳಿ ಮತ್ತು ವಿರೋಧ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಂಧಾನ ನಡೆದರೆ ಕಲಾಪ ಸುಗಮವಾಗಬಹುದು. ಇಲ್ಲವಾದಲ್ಲಿ ಅನಿರ್ಧಿಷ್ಟ ಅವಧಿಗೆ ಮುಂದಕ್ಕೆ ಹೋಗಬಹುದು.