*ನೀಟ್ ಅಕ್ರಮದ ವಿರುದ್ಧ ಸಿಡಿದೆದ್ದ ಯುವಜನತೆ: ದೆಹಲಿಯಲ್ಲಿ ಬೀದಿ ಬೀದಿಯಲ್ಲಿ ಹೋರಾಟಕ್ಕಿಳಿದ ವಿದ್ಯಾರ್ಥಿ ಸಮೂಹ; ಸಂಸತ್ ಭವನದ ಮುಂದೆ ತೀವ್ರಗೊಂಡ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ನೀಟ್-ಯುಜಿಸಿ ಪರೀಕ್ಷಾ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ.
ಸಂಸತ್ ಭವನ ಚಲೋಗೆ ಪೊಲೀಸರು ನಿರ್ಬಂಧವಿಧಿಸಿದ್ದರೂ ಕೇಳದ ಪ್ರತಿಭಟನಾಕಾರರು ದೆಹಲಿಯ ಜಂತರ್ -ಮಂತರ್ ನಿಂದ ಸಂಸತ್ ಭವನದತ್ತ ಮುನ್ನುಗ್ಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನದ ಮುಖ್ಯದ್ವಾರದ ಬಳಿ ಪ್ರತಿಭಟನಾಕಾರರು ಜಮಾವಣೆಗೊಂಡಿದ್ದು, ಸಂಸತ್ ನ ಎಲ್ಲಾ ದ್ವಾರಗಳ ಗೇಟ್ ಗಳನ್ನು ಮುಚ್ಚಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವರು ರಾಜೀನಾಮೆ ನೀಡಲೇಬೇಕು ಎಂದು ಪಟ್ತು ಹಿಡಿದಿದ್ದಾರೆ. ಪ್ರತಿಭಟನಾಕರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಪ್ರಯೋಗ, ಅಶ್ರುವಾಯು ಪ್ರಯೀಗ ಮಾಡಿದರೂ ಬಗ್ಗದ ವಿದ್ಯಾರ್ಥಿಗಳು ಇನ್ನಷ್ಟು ಆಕ್ರೋಶಗೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಸಂಸತ್ ಭವನದ ಮುಂದೆ ಭಾರಿ ಹೈಡ್ರಾಮಾ ನಡೆದಿದೆ.

ಮತ್ತೊಂದೆಡೆ ಬೇರೆ ಬೇರೆ ರಾಜ್ಯಗಳಿಂದಲೂ ಪ್ರತಿಭಟನಾಕಾರರು ಆಗಮಿಸುತ್ತಿದ್ದು, ಸಂಸತ್ ಭವನದ ಸುತ್ತ ಮುತ್ತಲಿನ ದೆಹಲಿಯ ಮೆಟ್ರೋ ನಿಲ್ದಾಣಗಳು ಉದ್ವಿಗ್ನಗೊಂಡಿವೆ. ರಾಜೀವ್ ಚೌಕ್ ಮೆಟ್ರೋ ನಿಲ್ದಾಣಕ್ಕೆ ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ಹರಿದು ಬಂದಿದ್ದು,. ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸರನ್ನು ನೂಕಿ, ಬ್ಯಾರಿಕೇಡ್ ಗಳನ್ನು ಹತ್ತಿ ಮೆಟ್ರೋ ನಿಲ್ದಾಣದ ಒಳಗೆ ನುಗ್ಗಿದ್ದಾರೆ. ಅಲ್ಲಿಂದ ಸಂಸತ್ ಭವನದತ್ತ ಸಾಗಿದ್ದಾರೆ.
ನೀಟ್ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ, ಮನನೊಂದ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದ ಯುವಜನತೆಯ ತಾಳ್ಮೆಯ ಕಟ್ಟೆಯೊಡೆದಿದ್ದು, ಸಿಡಿದೆದ್ದಿರುವ ವಿದ್ಯಾರ್ಥಿ ಸಮೂಹ ರಾಷ್ಟ್ರ ರಾಜಧಾನಿಯ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬೆಳವಣಿಗೆ ನಡುವೆ ಎಚ್ಚೆತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕರೆದು ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪ್ರತಿಭಟನಾಕಾರರನ್ನು ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.

