Latest

ಬೆಲ್ಲದ ಬಾಗೇವಾಡಿ ಶ್ರೀಗಳು ಬೆಲ್ಲದಷ್ಟೆ ಸಿಹಿಯಾದ ಮನಸ್ಸುಳ್ಳವರು

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :
ಬೆಲ್ಲದಬಾಗೇವಾಡಿಯ ಶ್ರೀ ಮಹಾಂತೇಶ್ವರ ವಿರಕ್ತಮಠದ  ಶ್ರೀ  ಶಿವಾನಂದ ಮಹಾಸ್ವಾಮಿಗಳು ಬೆಲ್ಲದಂತೆಯೇ ತಮ್ಮ ಬದುಕನ್ನು ರುಚಿಯಾಗಿಟ್ಟುಕೊಂಡವರು. ಎಲ್ಲರನ್ನೂ ಕೂಡ ಸೌಹಾರ್ದಯುತವಾಗಿ ಕಾಣುವುದರ ಮುಖಾಂತರ ಮಠಗಳನ್ನು ಮತ್ತು ಭಕ್ತರನ್ನು ಬೆಳೆಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
 ಬೆಲ್ಲದ ಬಾಗೇವಾಡಿ ವಿರಕ್ತ ಮಠದಲ್ಲಿ ಗುರು ಗೌರವವನ್ನು ಸಮರ್ಪಿಸಿ ಮಾತನಾಡಿದ ಅವರು, ಹಿಂದಿನ ಮಹಾ ತಪಸ್ವಿ  ಮಹಾಂತ ಶಿವಯೋಗಿಗಳ ಕೃಪಾ ಆಶೀರ್ವಾದವನ್ನು ಪಡೆದು ಇವತ್ತು ಬೆಲ್ಲದ ಬಾಗೇವಾಡಿಯ ಮಠವನ್ನು ಹುಕ್ಕೇರಿ ತಾಲೂಕಿನಲ್ಲಿ ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿಯೇ ಗುರುತಿಸುವಂತಹ ಅಪರೂಪದ ಮಠವಾಗಿ ಕಟ್ಟಿದ್ದಾರೆ. ಹಾಗೆ ಭಕ್ತರೊಂದಿಗೆ ಅತೀವ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಇವರು ಶತಾಯುಷಿಗಳಾಗಿ ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿರುವ ಶ್ರೀ ಶಿವಾನಂದ ಮಹಾಸ್ವಾಮಿಗಳು, ಸ್ವಾಮಿಗಳಿಗೆ ಭಕ್ತರೇ ಆಸ್ತಿಯಾಗಿ ನಿಂತಿರುತ್ತಾರೆ. ಹುಕ್ಕೇರಿ ತಾಲೂಕಿನಲ್ಲಿ ನಾವೆಲ್ಲ ಮಠಾಧೀಶರು ಎಲ್ಲರೊಂದಿಗೆ ಬೆರೆತು ಕಾರ್ಯವನ್ನು ಮಾಡುತ್ತಿದ್ದೇವೆ. ಇವತ್ತು ಮಠಗಳ ಜವಾಬ್ದಾರಿ ಕೇವಲ ಮಠಗಳನ್ನು ಬೆಳೆಸುವುದಲ್ಲ, ದೇಶಭಕ್ತಿಯನ್ನು, ದೇಶಪ್ರೇಮವನ್ನು ತುಂಬುವ ಕಾರ್ಯವನ್ನು ಕೂಡ ಮಾಡಬೇಕಿದೆ ಎಂದರು.
 ಇದೇ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯ ಅನೇಕ ಗುರುಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Related Articles

Back to top button