Latest

ಬೆಳಗಾವಿಯಲ್ಲಿ ಇತಿಹಾಸ ನಿರ್ಮಿಸಿದ ಸೇವ್ ವಿಟಿಯು ಹೋರಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವಿಭಜನೆ ವಿರೋಧಿಸಿ ವಿವಿಧ ಸಂಘಟನೆಗಳು ಬೆಳಗಾವಿ ನಗರದಲ್ಲಿ ಶನಿವಾರ ನಡೆಸಿದ ಪ್ರತಿಭಟನೆ ಬೆಳಗಾವಿಯ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಿತು.

ನಗರದ ಬೋಗಾರವೇಸ್ ಬಳಿ ಸೇರಿದ ಪ್ರತಿಭಟನಾಕಾರರು ಅಲ್ಲಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡರು. ವಿಟಿಯು ವಿಭಜನೆ ಮಾಡದಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ರವಾನಿಸಿದರು. ಡಿಸಿ ಎಸ್.ಬಿ. ಬೊಮ್ಮನಹಳ್ಳಿ ಮನವಿ ಸ್ವೀಕರಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ವಿಟಿಯು ವಿಭಜನೆ ಮಾಡಲು ಅವಕಾಶ ಕೊಡುವುದಿಲ್ಲ. ಅದಾಗಿಯೂ ಸರಕಾರ ವಿಭಜನೆ ಮಾಡಲು ಹೋದರೆ ಉತ್ತರ ಕರ್ನಾಟಕದ ಎಲ್ಲ ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದರು.
ಶಾಸಕ ಅಭಯ ಪಾಟೀಲ್ ಮಾತನಾಡಿ, ವಿಟಿಯು ಒಡೆದು ಬೆಳಗಾವಿ ಶಕ್ತಿ ಕುಗ್ಗಿಸಿವ ತಂತ್ರ ನಡೆಯುತ್ತಿದೆ. ವಿಭಜನೆ ಮಾಡದಂತೆ ಶಾಸಕರ ಸಹಿ ಹಾಕಿ ಸಿಎಂಗೆ ಪತ್ರ ಕೊಟ್ಟಿದ್ದೇವೆ. ಸರಕಾರ ನಿರ್ಧಾರ ಕೈಬಿಡಲೇ ಬೇಕು. ಇದರ ಜೊತೆಗೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಮಹಾಂತೇಶ ಕವಟಗಿಮಠ ಮಾತನಾಡಿ, ವಿಟಿಯು ವಿಭಜನೆಗೆ ವಿರೋಧ ವ್ಯಕ್ತವಾಗಿದ್ದರೂ ಸಿಎಂ ಸದನದಲ್ಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಬೇಡಿಕೆ ಈಡೇರುವ ವರೆಗೆ ಹೋರಾಟ ನಿಲ್ಲುವುದಿಲ್ಲ ಎಂದರು.

Home add -Advt

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ವಿಟಿಯು ವಿಭಜನೆ ದುರದೃಷ್ಟಕರ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶಾಸಕರು ಸೇರಿ ಸಿಎಂಗೆ ಮನವಿ ಮಾಡಿದ್ದೇವೆ. ಈ ಹೋರಾಟಕ್ಕೆ ನನ್ನ ಬೆಂಬಲ ಇದೆ. ಇದರಲ್ಲಿ ರಾಜಕಾರಣ ಬೇಡ. ಇದು ಒಡೆಯಲು ಬಿಡುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮ ಆಸ್ತಿ ಬಿಡಲ್ಲ. ಸದನದಲ್ಲಿ ಸಿಎಂ ಅವರಿಂದ ಸ್ಪಷ್ಟನೆ ಪಡೆದೇ ಪಡೆಯುತ್ತೇನೆ ಎಂದು ಭರವಸೆ ನೀಡಿದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ವಿಟಿಯು ಒಡೆಯುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಮುಂದೆಯು ಇದನ್ನು ಒಡೆಯಲು ಬಿಡುವುದಿಲ್ಲ. ಸಿಎಂ ತಾವು ಕೊಟ್ಟ ವಚನ ಈಡೇರಿಸಿಕೊಳ್ಳಬೇಕು ಎಂದರು.
ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ನೀರಾವರಿಗೆ ಹೋರಾಡಬೇಕು. ವಿಶ್ವವಿದ್ಯಾಲಯಕ್ಕೆ ಹೋರಾಡಬೇಕು. ಈಗ ಇದ್ದ ಯೋಜನೆಗಳನ್ನು ಉಳಿಸಿಕೊಳ್ಳುವುದಕ್ಕೂ ಹೋರಾಡಬೇಕಾದ ಪರಿಸ್ಥಿತಿ ಇದೆ. ಇದೆಂಥ ನ್ಯಾಯ. ವಿವಿ ಕುಲಪತಿ ಕೂಡ ಹಾಸನ ಕಡೆಯವರೇ ಇದ್ದಾರೆ. ಅನೇಕ ಯೋಜನೆಗಳಲ್ಲಿ ಬೆಳಗಾವಿಗೆ ಅನ್ಯಾಯ ಆಗಿದೆ. ಈಗ ಆಗಿರುವ ಸಮಸ್ಯೆ ಸರಿ ಮಾಡಬೇಕು. ಅಲ್ಲಿವರೆಗೆ ಹೋರಾಟ ನಿಲ್ಲಲ್ಲ ಎಂದರು.

ಹುಕ್ಕೇರಿ ಹಿರೆಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಈ ಅನ್ಯಾಯ ಸಹಿಸೋಕೆ ಆಗುವುದಿಲ್ಲ. ಸುಮ್ಮನಿದ್ದರೆ ನಮ್ಮನ್ನು ಉಳಿಯಲು ಬಿಡುವುದಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿ ಎಸ್ ಯಾವುದೇ ಶಾಸಕರಿರಲಿ ಉತ್ತರ ಕರ್ನಾಟಕ ಅನ್ಯಾಯ ಆದಾಗ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.‌ಹೆಗಡೆ ಮಾತನಾಡಿ, ಈ ಹೊರಾಟ ಬೆಳಗಾವಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುವಂತಿದೆ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಯಲಿದೆ. ಅದಕ್ಕೆ ಎಲ್ಲರ ಸಹಕಾ ಮುಂದುವರಿಬೇಕು ಎಂದರು.

ಇದೇ 20 ರಂದು ವಿಟಿಯು ಸಿಂಡಿಕೇಟ್ ಸಭೆ ಇದೆ. ವಿಟಿಯು ವಿಭಜನೆ ಮಾಡದಂತೆ ಅಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಸಿಂಡಿಕೇಟ್ ಸದಸ್ಯರು ತಿಳಿಸಿದ್ದಾರೆ ಎಂದರು.
ಕಾರಂಜಿ ಮಠದ ಗುರುಸಿದ್ದ ಸ್ವಾಮಿಗಳು, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಪ್ರತಿಭಟನೆ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ರೆಡೈ ರಾಜ್ಯ ಉಪಾಧ್ಯಕ್ಷ ಚೈತನ್ಯ ಕುಲಕರ್ಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಪ್ರಮುಖರಾದ ಅನಿಲ ಪೋತದಾರ, ಡಾ.ಸೋನಾಲಿ ಸರ್ನೋಬತ್, ರಾಜು ಚಿಕ್ಕನಗೌಡರ, ಕರ್ನಾಟಕ ರಕ್ಷಣಾ ವೇದಿಕೆಯ ಮಹಾದೇವ ತಳವಾರ, ಗಣೇಶ ರೋಖಡೆ, ದೀಪಕ್ ಗುಡಗನಟ್ಟಿ, ನ್ಯಾಯವಾದಿಗಳಾದ ಎಂ.ಬಿ.ಜಿರಲಿ, ಎಸ್.ಎಸ್.ಕಿವಡಸಣ್ಣವರ್, ಮುಳವಾಡಮಠ, ಅನುಶ್ರೀ ದೇಶಪಾಂಡೆ, ವಾಣಿಜ್ಯೋದ್ಯಮ ಸಂಘದ ಮಹೇಶ ಬಾಗಿ, ಕ್ರೆಡೈ ಅಧ್ಯಕ್ಷ ಕ್ವೈಸ್ ನೂರಾನಿ, ಪ್ರೊಫೇಶನಲ್ ಪೋರಮ್ ನ ಬಿ.ಎಸ್.ಪಾಟೀಲ, ಮಾಜಿ ಮೇಯರ್ ಸಿದ್ದನಗೌಡ ಪಾಟೀಲ, ವಿ.ಬಿ. ಜಾವೂರ್, ಸತೀಶ್ ಕುಲಕರ್ಣಿ, ರಾಜೀವ ಟೋಪಣ್ಣವರ್, ರೋಹನ್ ಜುವಳಿ, ಲೀನಾ ಟೋಪಣ್ಣವರ್, ಡಾ.ಸರಜೂ ಕಾಟ್ಕರ್, ಡಾ.ಎಚ್.ಬಿ. ರಾಜಶೇಖರ, ಕಿರಣ ನಿಪ್ಪಾಣಿಕರ್ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

Back to top button