ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನೇಕ ವರ್ಷಗಳಿಂದ ಹೂಳಿನಿಂದ ತುಂಬಿಕೊಂಡು ನೀರು ನಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸುಮಾರು ೮ ಎಕರೆ ವಿಸ್ತೀರ್ಣದ ಕೆರೆಯ ಪರಿಸ್ಥಿಯನ್ನು ಗಮನಿಸಿದ ಬೆಳಗಾವಿಯ ಪ್ಯಾಸ್ ಫೌಂಡೇಶನ್ ಹೂಳೆತ್ತುವ ಕಾರ್ಯಕ್ಕೆ ಇಂದು ಚಾಲನೆ ನೀಡಿದೆ.
ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರವಾಗುತ್ತಿದ್ದರೂ ಕೂಡ ಜನೇವರಿಯ ಹೊತ್ತಿನ ಬೇಸಿಗೆಯಲ್ಲಿ ಕೆರೆಯು ಸಂಪೂರ್ಣವಾಗಿ ಒಣಗಿ ಹೋಗುತ್ತಿತ್ತು. ಇದರಿಂದ ಗ್ರಾಮದ ಜನರು ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಆದ್ದರಿಂದ ಅದರ ಪುನರುಜ್ಜೀವನಗೊಳಿಸಲು ಮುಂದೆ ಬಂದ ಪ್ಯಾಸ್ ಫೌಂಡೆಶನ್ ಕೆರೆಯನ್ನು ಸುಮಾರು ೫ ಅಡಿಗಳ ಆಳ ಹೂಳೆತ್ತಿ ನೀರು ಸಂಗ್ರಹದ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಿದೆ.
ಇದರಿಂದ ೭ ಸಾವಿರ ಜನಸಂಖ್ಯೆಯುಳ್ಳ ಗ್ರಾಮಕ್ಕೆ ನೀರು ಲಭಿಸಲಿದ್ದು, ಸುತ್ತಲಿನ ಪ್ರದೇಶದ ಅಂತರ್ಜಲ ಮಟ್ಟವು ಹೆಚ್ಚಲಿದೆ. ಹೂಳೆತ್ತುವ ಕಾರ್ಯವು ಮೇ ಅಂತ್ಯದೊಳಗೆ ಕೊನೆಗೊಳ್ಳಲಿದೆ.
ಹೂಳೆತ್ತುವ ಕಾರ್ಯಕ್ಕೆ ಫೌಂಡೇಶನ್ನ ಅಧ್ಯಕ್ಷರಾದ ಡಾ. ಮಾಧವ ಪ್ರಭು ಅವರು ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಶಾಧ್ಯಕ್ಷೆ ಡಾ ಪ್ರೀತಿ ದೊಡವಾಡ – ಕೋರೆ, ಉಪಾಧ್ಯಕ್ಷ ಅಭಿಮನ್ಯು ಡಾಗಾ, ಸತೀಶ ಲಾಡ, ದೇಪಕ ಓವುಲಕರ, ಗೋಪಾಲ ಗಾವಡೆ, ಮಹೇಶ ಬಾಗಿ, ಬೈಲವಾಡ ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಾಯಣಿ ಗಿರೆಪ್ಪನವರ, ಜಿ ಪಂ. ಸದಸ್ಯರಾದ ಅನಿಲ ಮಾಕಲಮರಡಿ, ತಾ ಪಂ. ಕಾರ್ಯಕಾರಿ ಅಧಿಕಾರಿ ಮುಲ್ಲಾ, ವಿ ಆರ್ ಗಿರೆಪ್ಪನವರ, ರಾಮನಗೌಡರ ಮುಂತಾದವರು ಉಪಸ್ಥಿತರಿದ್ದರು.