ಪ್ರಗತಿವಾಹಿನಿ ಆರಂಭಿಸಿರುವ ವಿಟಿಯು ವಿಭಜನೆ ವಿರೋಧಿ ಆಂದೋಲನಕ್ಕೆ ಎಲ್ಲೆಡೆ ಬೆಂಬಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣದಿಂದ ವಿಭಜಿಸದೆ ಮೊದಲಿನಂತೆಯೇ ಮುಂದುವರಿಸಬೇಕು ಎಂದು ರಾಜ್ಯದ 50ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿರುವ ಮನವಿ ಪತ್ರವನ್ನು ಅಭಯ ಪಾಟೀಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬುಧವಾರ ಸಲ್ಲಿಸಿದ್ದಾರೆ.
ವಿಶ್ವೇಶ್ವರಯ್ಯ ವಿವಿಯ ಶಕ್ತಿಯನ್ನು ಕುಗ್ಗಿಸಲು ಮತ್ತು ಆಡಳಿತದ ಹಿಡಿತವನ್ನು ಕುಗ್ಗಿಸಲು ವಿಟಿಯು ವಿಭಜಿಸಲಾಗುತ್ತಿದೆ ಎನ್ನುವ ಭಾವನೆ ಉತ್ತರ ಕರ್ನಾಟಕದ ಜನರಲ್ಲಿ ಬಂದಿದೆ. 1998ರಲ್ಲಿ ಅಸ್ಥಿತ್ವಕ್ಕೆ ಬಂದಿರುವ ವಿವಿ 200ಕ್ಕಿಂತ ಕಾಲೇಜುಗಳನ್ನು ಹೊಂದಿದ್ದು, 4-5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು, ಕಲ್ಬುರ್ಗಿಗಳಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಮೈಸೂರಿನಲ್ಲಿ ಪ್ರಾದೇಶಿಕ ಕಚೇರಿ ಇರುವುದರಿಂದ ಹತ್ತಿರದ ಹಾಸನದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಹಾಸ್ಯಾಸ್ಪದವಾಗುತ್ತದೆ. ಹಾಗಾಗಿ ಯಾವುದೇ ಕಾಣದಿಂದ ವಿಟಿಯುವನ್ನು ವಿಭಜಿಸುವ ಕೆಲಸ ಮಾಡಬಾರದೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ವಿಶೇಷವೆಂದರೆ ದಕ್ಷಿಣ ಕರ್ನಾಟಕದ ಹಲವು ಶಾಸಕರು ಕೂಡ ಈ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.