ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ :
ಚಿನ್ನದ ಒಡವೆಗಳನ್ನು ಸ್ವಚ್ಛ ಮಾಡಿಕೊಡುವುದಾಗಿ ಹೇಳಿ ಮನೆಗೆ ಬಂದು ಒಂಟಿ ಮಹಿಳೆಗೆ ವಂಚಿಸಿ ೩೫ ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನ ೧೨ ರ ಸುಮಾರಿಗೆ ಘಟಪ್ರಭಾದಲ್ಲಿ ನಡೆದಿದೆ. ರೈಲ್ವೆ ನಿಲ್ದಾಣ ಎದುರುಗಡೆ ಯಾವಾಗಲೂ ನೂರಾರು ಜನರು ತಿರುಗಾಡುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಬಬಲಾದಿಯವರ ಮನೆಯಲ್ಲಿ ಹಾಡುಹಗಲೆ ಈ ಘಟನೆ ನಡೆದಿರುವುದು ಪಟ್ಟಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೈಕ್ನಲ್ಲಿ ಬಂದ ಇಬ್ಬರು ವಂಚಕರು ಮನೆಯಲ್ಲಿ ೬೫ ವರ್ಷದ ಓರ್ವ ಮಹಿಳೆ ಮಾತ್ರ ಇರುವುದನ್ನು ಗಮನಿಸಿ ಮನೆಯೊಳಗೆ ಬಂದು ನಿಮ್ಮ ಮುಂದೆಯೆ ನಿಮ್ಮ ಹಳೆಯ ಒಡವೆಗಳನ್ನು ಸ್ವಚ್ಛಗೊಳಿಸುವುದಾಗಿ ಹೇಳಿ ನಂಬಿಸಿದ್ದಾರೆ. ವಂಚಕರ ಮಾತು ನಂಬಿ ಒಡವೆ ತಂದು ಕೊಟ್ಟ ನಂತರ ಬಿಸಿ ನೀರು ತರಲು ಹೇಳಿದ್ದಾರೆ. ಬಿಸಿ ನೀರಿನ ಪಾತ್ರೆಗೆ ಕಲರ್ ಹಾಕಿ ಅದಕ್ಕೆ ಒಡವೆ ಹಾಕಿದಂತೆ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಒಡವೆಯನ್ನು ನಯವಾಗಿ ಎಗರಿಸಿದ್ದು ಮಹಿಳೆಯ ಗಮನಕ್ಕೆ ಬಂದೇ ಇಲ್ಲ. ಪಾತ್ರೆಯನ್ನು ಮತ್ತೆ ಮತ್ತೆ ಬಿಸಿ ಮಾಡಿಕೊಂಡು ಬರಲು ಹೇಳಿ ಮಹಿಳೆಯನ್ನು ಒಳಗೆ ಕಳುಹಿಸಿದ ಖದೀಮರು ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ.
ಘಟನೆಯ ನಂತರ ವಂಚಕರನ್ನು ಹುಡುಕಲು ಯತ್ನಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಸ್ಥಳಕ್ಕೆ ಘಟಪ್ರಭಾ ಪಿಎಸ್ಐ ರಮೇಶ ಪಾಟೀಲ ಭೇಟಿ ನೀಡಿದ್ದು ತನಿಖೆ ನಡೆಸಿದ್ದಾರೆ. ಘಟಪ್ರಭಾ ಠಾಣೆಯಲ್ಲಿ ದೂರು ದಾಖಲಾಗಿದೆ.