Latest

ಪಾಲಕರು ಮತದಾನ ಮಾಡುವಂತೆ ಮಕ್ಕಳು ನಿಗಾ ಇಡಿ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಪ್ರತಿ ದಿನ ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗುವಂತೆ ಪಾಲಕರು ನೋಡಿಕೊಳ್ಳುತ್ತಾರೆ. ಲೋಕಸಭಾ ಚುನಾವಣೆಯ ದಿನದಂದು ತಮ್ಮ ಪಾಲಕರು ತಮ್ಮ ಅಮೂಲ್ಯ ಮತಗಳನ್ನು ಮತದಾನ ಮಾಡುವ ಮೂಲಕ ಕರ್ತವ್ಯ ನಿರ್ವಹಿಸಲು ಮಕ್ಕಳು ಸಹಾಯ ಮಾಡಬೇಕು. ತಾಲೂಕಿನಲ್ಲಿ ಪ್ರತಿಶತ ಮತ ಚಲಾವಣೆಯಾಗುವಂತೆ ಮಕ್ಕಳು ಸಹ ಚುನಾವಣೆ ಯಶಸ್ವಿಗೆ ಶ್ರಮಿಸಬೇಕೆಂದು ಸ್ವಿಫ್ ಸಮಿತಿ ಅಧ್ಯಕ್ಷ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
  ಅವರು ಮೂಡಲಗಿ ಮತ್ತು ಕಲ್ಲೋಳ್ಳಿ ಪಟ್ಟಣಗಳಲ್ಲಿ ಹಮ್ಮಿಕೊಂಡ ಬೈಕ್ ರ್ಯಾಲಿ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. ಮತದಾನವು ಪವಿತ್ರ ಕಾರ್ಯವಾಗಿದೆ. ಪ್ರತಿಯೊಬ್ಬ 18 ವರ್ಷ ಮೇಲ್ಪಟ್ಟ ದೇಶದ ಪ್ರಜೆಯು ಮತ ನೀಡುವ ಮೂಲಕ ಅರ್ಹ ದೇಶವನ್ನಾಳುವ ಪ್ರಬುದ್ಧ ಜನ ಸೇವಕರ ಆಯ್ಕೆ ಮಾಡಬೇಕು. ಹಣ, ಹೆಂಡ ಇನ್ನಿತರ ಆಸೆಗಾಗಿ ಅಮೂಲ್ಯ ಮತಗಳನ್ನು ಮಾರಾಟ ಮಾಡಿಕೊಳ್ಳದೆ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೊಡಿಸಬೇಕು ಎಂದು ಹೇಳಿದರು.
 ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪಾಲಕರ ಆದ್ಯ ಕರ್ತವ್ಯ. ಅದರಂತೆ ಮಕ್ಕಳು ಸಹ ಪಾಲಕರು ಚುನಾವಣೆ ಕರ್ತವ್ಯದಲ್ಲಿ ತೊಡಗುವಂತೆ ಪ್ರೇರೇಪಣೆ ಮಾಡಬೇಕು. ಮತದಾನದ ಕುರಿತು ಮಕ್ಕಳು ಕೂಡಾ ಮನೆಯಲ್ಲಿ ಪಾಲಕರ ಜೊತೆಯಲ್ಲಿ ಚರ್ಚಿಸಬೇಕು. ಪ್ರಬುದ್ಧ ಸಮಾಜ ನಿರ್ಮಾಣವಾಗ ಬೇಕಾದರೆ ಎಲ್ಲರೂ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಏಪ್ರೀಲ್ 23ರ ಮತದಾನದ ದಿನದಂದು ಮಕ್ಕಳು ಪಾಲಕರಿಗೆ ಮನವರಿಕೆ ಮಾಡಿಕೊಟ್ಟು ತಮ್ಮ ಹಕ್ಕು ಚಲಾಯಿಸಲು ಪ್ರೋತ್ಸಾಹಿಸಬೇಕೆಂದು ಕೊರಿಕೊಂಡರು.
 ಮೂಡಲಗಿ ಹಾಗೂ ಕಲ್ಲೋಳ್ಳಿ ಗ್ರಾಮಗಳಲ್ಲಿ ಪುರಸಭೆ, ಪಟ್ಟಣ ಪಂಚಾಯತ, ಶಿಕ್ಷಣ ಇಲಾಖೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಚುನಾವಣಾ ಘೋಷಣೆಗಳೊಂದಿಗೆ  ಜಾಥಾ ಕಾರ್ಯಕ್ರಮ ಜರುಗಿತು.
 ಜಾಥಾದಲ್ಲಿ ಯೋಜನಾಧಿಕಾರಿ ಎಸ್.ಎಚ್ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಗೋವಿಂದ ಪೂಜೇರಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಸ್ ಎಮ್ ಬಬಲಾದಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ತಾಳಿಕೋಟಿ, ಎಸ್.ಎಸ್ ರೊಡ್ಡನವರ, ಹಣಮಂತ ಬಸಳಿಗುಂದಿ, ಬಿ.ಆರ್.ಪಿ ಕೆ.ಎಲ್ ಮೀಶಿ, ಸಮುದಾಯ ಸಂಘಟನಾಧಿಕಾರಿ ಸಿ.ಬಿ ಪಾಟೀಲ್, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಸಿ.ಆರ್.ಪಿ ಜಿ.ಕೆ ಉಪ್ಪಾರ, ಪ್ರಧಾನ ಗುರುಗಳಾದ ಟಿ.ಎಮ್ ಬರನಟ್ಟಿ, ಸಿ.ಎಲ್ ಬಡಿಗೇರ, ಎಸ್ ಬಿ ಗೋಸಬಾಳ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button