
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿರುವ ಜೈನ್ ಇಂಟರ್ ನ್ಯಾಶನಲ್ ಟ್ರೆಡ್ ಆರ್ಗನೈಸೇಶನ್ -ಜಿತೋ ಸಂಸ್ಥೆ ಬೆಳಗಾವಿ ವತಿಯಿಂದ ಹಾಗೂ ಜಿತೋ ಕೆಕೆಜಿ ವಲಯ ಇವರ ಸಹಯೋಗದೊಂದಿಗೆ ಮೇ 9 ಮತ್ತು 10 ಎರಡು ದಿನಗಳ ಕಾಲ ಜಿತೋ ಹರ್ಷೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಸಭಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಅವರು ಹೇಳಿದರು.
ಬೆಳಗಾವಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿತೋ ಸಂಸ್ಥೆಯು ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಇದೀಗ ಜಿತೊ ಹರ್ಷೋತ್ಸವ ಕಾರ್ಯಕ್ರಮದ ಮೂಲಕ ಬೆಳಗಾವಿಯ ಜನತೆಗೆ ಹೆಚ್ಚಿನ ಜ್ಞಾನಾರ್ಜನೆ ನೀಡುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ತಜ್ಞ ಉಪನ್ಯಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಸಂಯೋಜಕ ವಿಕ್ರಮ ಜೈನ್ ಅವರು ಮಾತನಾಡಿ , ಏಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸುನಿಲ ಶಿಂಘಿ ಅವರು ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುವರು. ಅವರೊಂದಿಗೆ ಜಿತೋ ಅಪೆಕ್ಸ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಮಧ್ಯಾಹ್ನದ ಅವಧಿಯಲ್ಲಿ ವಿವಿಧ ಸ್ಥರದ ನೈಜ ಕಥೆಗಳ ವಿವರವನ್ನು ಶಾನದಾರ ಶಾಂತಿಭಾಯಿ ಅವರು ನೀಡಲಿದ್ದಾರೆ. ತನ್ನ ಜಾದು ಕಲೆಯ ಮೂಲಕ ಮನಸ್ಸು ಅರ್ಥಮಾಡಿಕೊಂಡು ಉತ್ತರಿಸುವ ಕಲಾಕಾರ ವಿವೇಕ ಶಿಂಘಿ ಅವರು ತಮ್ಮ ಜಾದು ಕಲೆಯನ್ನು ಪ್ರದರ್ಶಿಸುವರು. ಸಾಯಂಕಾಲ 7 ಗಂಟೆಗೆ ವಿವೇಕ ಡಿ. ಪಾರೇಖ ಮತ್ತು ಅವರ ತಂಡದಿಂದ ವಿಶೇಷ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಮೇ 10 ರಂದು ಬೆಳಿಗ್ಗೆ ದೈವಿಶಕ್ತಿ ಮತ್ತು ಮಹಿಳಾ ನಿರ್ಭರತಾ ಕುರಿತು ಖ್ಯಾತ ಆಧ್ಯಾತ್ಮಿಕ ಉಪನ್ಯಾಸಕ ರಿಷಿ ನಂದಾ ಅವರು ಉಪನ್ಯಾಸ ನೀಡುವರು. ತದನಂತರ ಕೃಷ್ಣಾ ರಾಠಿ ಇವರು ವೈಯಕ್ತಿಕ ಮತ್ತು ವ್ಯವಹಾರ ಬ್ರ್ಯಾಂಡ್ ನಿರ್ಮಾಣದ ಬಗ್ಗೆ ಮಾತನಾಡುವರು. ಭಾರತ ದೇಶದ ರಾಜತಾಂತ್ರಿಕ ಹಾಗೂ ಕೇಂದ್ರ ಸರಕಾರದ ಓರ್ವ ಸಲಹೆಗಾರರಾದ ನಿವೃತ್ತ ಐಎಫ್ ಎಸ್ ಅಧಿಕಾರಿ ಡಾ. ದೀಪಕ ವೋರಾ ಅವರು “ಜಾಮವಂತ ಪರಿಣಾಮ- ಇಂಡಿಯಾ ಹೇಗೆ ಭಾರತವಾಗುತ್ತದೆ” ಎಂಬ ವಿಷಯದ ಬಗ್ಗೆ ಮಾತನಾಡುವರು ಎಂದು ಅವರು ತಿಳಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಜೀವನದಲ್ಲಿ ಎಲ್ಲವೂ ಸಾಧ್ಯ ಎಂಬ ವಿಷಯ ಕುರಿತು ರಾಹುಲ ಕಪೂರ ಅವರು ಮಾತನಾಡಲಿದ್ದಾರೆ. ಇದಾದ ಬಳಿಕ ಯುವ ಯಶಸ್ವಿ ಉದ್ಯಮಿಗಳ ಸಂದರ್ಶನ ನಡೆಯಲಿದೆ ಎಂದು ಹೇಳಿದ ಅವರು, ಈ ಎಲ್ಲ ಕಾರ್ಯಕ್ರಮಗಳಿಗೆ ಆಹ್ವಾನಿತ ಪಾಸ್ ಗಳ ಮೇಲೆ ಪ್ರವೇಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿತೋ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ಮೊದಲಾದವರು ಉಪಸ್ಥಿತರಿದ್ದರು.



