Latest

ಮಹಿಳಾ ಸಬಲೀಕರಣದಿಂದ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ- ಪ್ರದೀಪ ತೇಲಸಂಗ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಹಿಳಾ ಸಬಲೀಕರಣದಿಂದ ಮಾತ್ರ ಸುಭದ್ರ ಮತ್ತು ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಲಿಂಗಾಯತ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ ತೇಲಸಂಗ ಹೇಳಿದ್ದಾರೆ.
ಲಿಂಗಾಯತ ಸೇವಾ ಸಮಿತಿ ಹಾಗೂ ತೇಲಸಂಗ ಪರಿವಾರದ ವತಿಯಿಂದ ತೇಲಸಂಗ ಸಮೂಹ ಸಂಸ್ಥೆಯ ಸಭಾ ಭವನದಲ್ಲಿ ಭಾನುವಾರ ಆಯೋಜಿಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಮಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ತ್ರೀ ಸಮಾನತೆಯ ಕ್ರಾಂತಿ ಆರಂಭವಾಗಿದ್ದು 12 ನೇ ಶತಮಾನದಲ್ಲಿ. ವಿಶ್ವಗುರು ಬಸವಣ್ಣನವರಿಂದಾಗಿ 12 ನೇ ಶತಮಾನದಲ್ಲಿ ಅನೇಕ ಮಹಿಳೆಯರು ಧಾರ್ಮಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡರು ಎಂದರು.
ಭಾರತದ ಸಂವಿಧಾನವು ಲಿಂಗ ತಾರತಮ್ಯವಿಲ್ಲದ ಸಮಾನತೆಯ ಅವಕಾಶ ಕಲ್ಪಿಸಿರುವುದರಿಂದ ಇಂದು ರಕ್ಷಣಾ ಇಲಾಖೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಪ್ರತಿಭೆಯನ್ನು ಸಾದರ ಪಡಿಸುತ್ತಿದ್ದಾರೆ. ಮಹಿಳೆಯರ ಈ ಸಾಧನೆಯನ್ನು ನಾವಿಂದು ಗೌರವಿಸಬೇಕಾಗಿದೆ ಎಂದರು.
ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ರೊಟ್ಟಿ ಮಾತನಾಡಿ, ಗಾರ್ಮೇಂಟ್ ಕ್ಷೇತ್ರದ ಮಹಿಳೆಯರ ಯಶಸ್ವಿ ಹೋರಾಟದ ಸಂಕೇತವಾಗಿ ವಿಶ್ವ ಸಂಸ್ಥೆಯು 1975 ರ ಮಾರ್ಚ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುವ ಘೋಷಣೆ ಮಾಡಿದೆ. ಅಂದಿನಿಂದ ಪ್ರತಿ ವರ್ಷ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿಯೇ ಮಹಿಳಾ ಸಬಲೀಕರಣ ಚಳುವಳಿ ಆರಂಭಿಸಿದ್ದರು. ಮಹಿಳೆಯರಿಗೆ ಪುರುಷ ಸಮಾನ ಅವಕಾಶ ಕಲ್ಪಿಸುವ ಮೂಲಕ ಲಿಂಗ ತಾರತಮ್ಯವನ್ನು ಹೋಗಲಾಡಿಸಿದ್ದರು. ಅಂದು ಆರಂಭವಾದ ಚಳುವಳಿಯು ಇಂದು ಯಶಸ್ಸು ಕಾಣುತ್ತಿದೆ. ಈ ಚಳುವಳಿ ಮುಂದುವರೆಯಬೇಕು ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಮಹಿಳೆಯರನ್ನು ಮಾತೃ ದೇವೋಭವ ಎಂದು ವೈಭವೀಕರಿಸಿ, ನಂತರ ಅವಳನ್ನು ಅಡುಗೆ ಮನೆಯಲ್ಲಿ ಕಟ್ಟಿ ಹಾಕುವ ಸನಾತನ ಧರ್ಮದ ಕಟ್ಟಳೆಗಳ ವಿರುದ್ಧ ನಿಜವಾದ ಸ್ತ್ರೀ ವಿಮೋಚನಾ ಚಳುವಳಿ ಆರಂಭಿಸಿ, ಅದಕ್ಕೆ ಕ್ರಾಂತಿಯ ರೂಪ ನೀಡಿದ್ದು ವಿಶ್ವಗುರು ಬಸವಣ್ಣನವರು. ಜಗತ್ತಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಜನರು ಬಸವಣ್ಣನವರಿಂದ ಸಾಕ್ಷರರಾದರು. ಅಕ್ಷರ ಕಲಿತು ವಿಶ್ವಮಾನ್ಯ ವಚನ ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ ಎಂದರು.
ಜಗನ್ಮಾತೆ ಅಕ್ಕಮಹಾದೇವಿ ಅವರು ಜಗತ್ತಿನ ಪ್ರಪ್ರಥಮ ಸಾಕ್ಷರ ಮಹಿಳೆ. ಪ್ರಪ್ರಥಮ ಕವಯಿತ್ರಿ. ಅಕ್ಕಮಹಾದೇವಿಯವರ ಜನ್ಮದಿನವನ್ನು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಬೇಕು ಎಂದರು.
ಪ್ರದೀಪ ತೇಲಸಂಗ ಅವರು ದತ್ತು ಪಡೆದು ಅಭಿವೃದ್ದಿ ಪಡಿಸಿರುವ ಖಾಸಬಾಗದ ಶಾಲೆ ನಂ. 3 ರ ಶಿಕ್ಷಕಿ ಉಜ್ವಲಾ ಹುಲಮನಿ ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಉಜ್ವಲಾ, ಪಿ.ಬಿ.ರಿತ್ತಿ, ರವಿರಾಜ ಪಾಟೀಲ, ಮಾರುತಿ ಕಾಮಗಾರ ಮಾತನಾಡಿದರು. ಸಂಚಾರಿ ಗುರು ಬಸವ ಬಳಗದ ರಾಜು ಕುಂದಗೋಳ ವಂದಿಸಿದರು.
ವಿದ್ಯಾ ತೇಲಸಂಗ, ಲಕ್ಷ್ಮಣ ಜೋಗಿನ, ವೀಣಾ ಜೋಗಿನ, ರಾಜು ಮಗದುಮ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Related Articles

Back to top button