
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರನ್ನು ಪ್ರೋತ್ಸಾಹಿಸಲು ಸ್ತ್ರೀಸಾಮರ್ಥ್ಯ, ಸ್ತ್ರೀ ಶಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಹಾಲಕ್ಷ್ಮಿ ಲೇಔಟ್ ನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಪುರಾಣ, ಇತಿಹಾಸದಲ್ಲಿ ಮಹಿಳೆಯರು ಮಾಡಿದ ಸಾಧನೆ ಅಗಣಿತ. ಈಗಿನ ಮಹಿಳೆಯರೂ ಸಾಧನೆ ಮಾಡಿದ್ದಾರೆ. ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರು ಕಿತ್ತೂರು ಚೆನ್ನಮ್ಮ, ಈಗ ನಮ್ಮ ಸಿಎಸ್ ಮಹಿಳೆ ಇದ್ದಾರೆ . ಬ್ಯಾಂಕ್ ಐಟಿ ಬಿಟಿಯಲ್ಲಿ ಸಾಕಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿಗೆ ಈಗ ಬೇಕಾಗಿರುವುದು ಅವಕಾಶ. ಹುಟ್ಟಿದಾಗ ಬಡತನ ಇರಬಹುದು ಸಾಯುವವರೆಗೂ ಬಡತನ ಇರಬೇಕಿಲ್ಲ. ನಮ್ಮ ಶ್ರಮದಿಂದ ನಾವು ಸಾಧನೆ ಮಾಡಬಹುದು. ಸುಮಾರು ಒಂದೂವರೆ ಲಕ್ಷ ಮಹಿಳೆಯರು ಇರುವ ಸ್ತ್ರೀ ಶಕ್ತಿ ಸಂಘಗಳಿಗೆ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು ಒಂದುವಾರದಲ್ಲಿ ಇನ್ನೂ 100 ಕೋಟಿ ಬಿಡುಗಡೆ ಮಾಡಲಾಗುವುದು. ಇದು ಸಾಕಾರಗೊಂಡರೆ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಯಶಸ್ವಿಯಾಗುತ್ತದೆ” ಎಂದರು.
“ಮನೆ ಕೆಲಸ ಮಾಡುವವರು, ಕೂಲಿ ಮಾಡುವವರಿಗೆ ಸಹಾಯ ಮಾಡಲು ಸ್ತ್ರೀ ಶಕ್ತಿ ಯೋಜನೆ ರೂಪಿಸಿದ್ದೇನೆ. ಈ ವರ್ಷ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುವ ಕೆಲಸ ಮಾಡಿದ್ದೇವೆ. ಗ್ರಾಮಿಣ ಪ್ರದೇಶದಲ್ಲಿ ದುಡಿಯುವ ಮಹಿಳೆಯರಿಗೆ ಆರೋಗ್ಯದ ರಕ್ಷಣೆಗೆ ಪ್ರತಿ ಕುಟುಂಬಕ್ಕೆ 1000 ರೂ. ನೀಡುವ ಯೋಜನೆ ಮಾಡಿದ್ದೇವೆ. ಮಹಿಳೆಯರಿಗಾಗಿ ನಮ್ಮ ಆಡಳಿತದಲ್ಲಿ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅದನ್ನು ಸದುಪಯೋಗ ಮಾಡಿಕೊಂಡರೆ ಸಾಕಷ್ಟು ಅಭಿವೃದ್ಧಿ ಮಾಡಲು ಸಾಧ್ಯವಿದೆ. ಪಾಶ್ಚಿಮಾತ್ಯ ದೇಶದಲ್ಲಿ ವೆಚ್ಚ ಮಾಡುವ ಸಂಸ್ಕೃತಿ ಇದೆ. ನಮ್ಮಲ್ಲಿ ಉಳಿತಾಯ ಮಾಡುವ ಸಂಸ್ಕೃತಿ ಇದೆ. ಅಮೆರಿಕದಲ್ಲಿ ಬ್ಯಾಂಕ್ ಗಳು ದಿವಾಳಿ ಆಗುತ್ತವೆ. ಆದರೆ ಭಾರತದಲ್ಲಿ ಸಾಸಿವೆ, ಜೀರಿಗೆ ಡಬ್ಬಿಗಳು ಗೆಲುವು ಸಾಧಿಸುತ್ತವೆ” ಎಂದು ಅವರು ಶ್ಲಾಘಿಸಿದರು.
“ಸೇಫ್ ಸಿಟಿ ಯೋಜನೆ ಅಡಿ ಬೆಂಗಳೂರಿನಲ್ಲಿ 7000 ಕ್ಯಾಮರಾ ಅಳವಡಿಸಿದ್ದೇವೆ. ಮಹಿಳೆಯರು ರಾತ್ರಿ ಪಾಳಿಯಲ್ಲಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸಲು ಕಾನೂನು ತಿದ್ದುಪಡಿ ಮಾಡಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಗೋಪಾಲಯ್ಯ ಇತರರು ಉಪಸ್ಥಿತರಿದ್ದರು.