Latest

ಎಲೆಕ್ಟ್ರಾನಿಕ್ಸ್ ಆರ್ ಅಂಡ್ ಡಿ ಕೇತ್ರದಲ್ಲಿರುವ ಉದ್ಯಮಿಗಳಿಗೆ ಮುಖ್ಯಮಂತ್ರಿಗಳ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಎಲೆಕ್ಟ್ರಾನಿಕ್ಸ್ ಆರ್ ಅಂಡ್ ಡಿ ಕೇತ್ರದಲ್ಲಿರುವ ಉದ್ಯಮಿಗಳು ಕರ್ನಾಟಕವನ್ನು ಚಿಮ್ಮುಹಲಗೆಯಾಗಿ ಬಳಸಿ ತಮ್ಮೊಂದಿಗೆ ರಾಜ್ಯವನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅವರು ಆಯೋಜಿಸಿದ್ದ 11 th Strategic Electronic Summit- Defence and Aerospace ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಆರ್ ಅಂಡ್ ಡಿ ಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎಲ್ಲಾ ಕ್ಷೇತ್ರಗಳ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ 400 ಆರ್ ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ವಿಶ್ವದ ಬೇರೆ ಯಾವ ನಗರದಲ್ಲಿಯೂ ಇಷ್ಟು ಕೇಂದ್ರಗಳಿಲ್ಲ. 500 ಫಾರ್ಚೂನ್ ಅಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಎಲೆಕ್ಟ್ರಾನಿಕ್ ಆರ್ ಅಂಡ್ ಡಿ ಬೆಂಗಳೂರಲ್ಲದೇ ಬೇರೆಲ್ಲೂ ಅಭಿವೃದ್ಧಿಯಾಗಲು ಸಾಧ್ಯವಿಲ್ಲ . ಈ ಕ್ಷೇತ್ರದಲ್ಲಿ ಮೇಲೇರಲು ಬೆಂಗಳೂರು ಒಂದು ಚಿಮ್ಮುಹಲಗೆಯಂತೆ ಕೆಲಸಮಾಡುತ್ತದೆ ಎಂದರು.

ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ:
ಏರೋಸ್ಪೇಸ್ ಹಾಗೂ ರಕ್ಷಣಾ ಆರ್ ಅಂಡ್ ಡಿ ಹೊಂದಿರುವ ಮೊದಲ ರಾಜ್ಯ ಕರ್ನಾಟಕ. ಸೆಮಿಕಂಡಕ್ಟರ್ ಹಾಗೂ ನವೀಕರಿಸಬಹುದಾದ ಇಂಧನ ನೀತಿಯನ್ನು ಹೊಂದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆರ್ ಅಂಡ್ ಡಿ ನೀತಿಗೆ ಸಹ ಅನುಮೋದನೆ ದೊರೆಯಲಿದೆ ಎಂದರು. ಗ್ಯಾರೇಜ್ ನಿಂದ ಹಿಡಿದು ಅತ್ಯುನ್ನತ ಸಂಸ್ಥೆಗಳ ಆರ್ ಅಂಡ್ ಡಿಯವರೆಗೂ ಸಹಾಯ ಮತ್ತು ನೆರವನ್ನು ಒದಗಿಸಲಾಗುವುದು. ನಮ್ಮ ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲ ಸಮಾಜವಿರಬೇಕೆಂಬ ಆಶಯ ನಮ್ಮದು. ಜೀವನೋಪಾಯಕ್ಕೆ ಅವಕಾಶಗಳನ್ನು ಒದಗಿಸುವ ರಾಜ್ಯ ಮಾತ್ರವಾಗಿರದೇ ಆರ್ ಅಂಡ್ ಡಿ ಮೂಲಕ ಭವಿಷ್ಯದಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ಹೊಂದಬೇಕೆಂದು ಎಂಬ ಉದ್ದೇಶ ನಮ್ಮದು ಎಂದರು. 2000 ಎಕರೆಗಳನ್ನು ರಕ್ಷಣಾ ಉತ್ಪಾದನೆಗೆ ಹಾಗೂ 1000 ಎಕರೆಯನ್ನು ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಗೆ ಮೀಸಲಿರಿಸಿದೆ. ಕೈಗಾರಿಕಾ ನೀತಿ, ಏರೋಸ್ಪೇಸ್‍ನೀತಿಗಳು ಈಗಾಗಲೇ ಇರುವುದರಿಂದ ಉದ್ಯಮಿಗಳೂ ಬೆಂಗಳೂರಿಗೆ ಬಂದು ಯಶಸ್ವಿಯಾಗುವಂತೆ ಕರೆ ನೀಡಿದರು. ಅದಕ್ಕೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಭಾರತದ ಶೇ. 60 ರಷ್ಟು ರಕ್ಷಣಾ ಆಮದನ್ನು ಮೇಕ್ ಇನ್ ಇಂಡಿಯಾಗೆ ಪರಿವರ್ತನೆ :

ಕಳೆದ ದಶಕದಿಂದ ರಕ್ಷಣಾ ವಲಯದ ಚಿತ್ರಣವೇ ಬದಲಾಗಿದೆ. ಪ್ರಧಾನಿಯವರ ಆತ್ಮನಿರ್ಭರದ ಆಶಯವನ್ನು ದೊಡ್ಡ ಮಟ್ಟದಲ್ಲಿ ಸಾಕಾರಗೊಳಿಸುತ್ತಿರುವ ಡಿಆರ್‍ಡಿಓ ಸಂಸ್ಥೆಯನ್ನು ನಾನು ಅಭಿನಂದಿಸುತ್ತೇನೆ. ಕಳೆದ ಐದು ವರ್ಷಗಳಿಂದ ಸುಮಾರು 60 ರಷ್ಟು ರಕ್ಷಣಾ ಆಮದನ್ನು ಮೇಡ್ ಇನ್ ಇಂಡಿಯಾ ಆಗಿ ಪರಿವರ್ತಿಸಲಾಗಿದೆ. ಕೆಲವೊಂದು ಉತ್ಪನ್ನಗಳನ್ನು ಭಾರತ ರಪ್ತನ್ನು ಕೂಡ ಮಾಡುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿಯೂ ಎಲೆಕ್ಟ್ರಾನಿಕ್ಸ್ ಮಹತ್ವದ ಪಾತ್ರ ವಹಿಸಿದೆ. ರಾಷ್ಟ್ರದ ರಕ್ಷಣಾ ವಲಯದ ಅಭಿವೃದ್ಧಿಗೆ ಇದು ಪೂರಕವಾಗಿದೆ. ಪ್ರಧಾನಿ ಮೋದಿಯವರಿಗೆ ಭಾರತದ ತಂತ್ರಜ್ಞರ ಮೇಲೆ ಬಹಳ ವಿಶ್ವಾಸವಿದೆ. ಕೌಶಲ್ಯಾಭಿವೃದ್ಧಿಯಿಂದ ಆತ್ಮನಿರ್ಭರಭಾರತ , ಮೇಕ್ ಇನ್ ಇಂಡಿಯಾ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಇಡೀ ವಿಶ್ವ ಭಾರತದ ಈ ಬೆಳವಣಿಗೆಯತ್ತ ತಿರುಗಿ ನೋಡಿದ್ದು, ವಿವಿಧ ದೇಶಗಳು ತಂತ್ರಜ್ಞಾನದ ಅಭಿವೃದ್ಧಿಗಾಗಿ ಭಾರತದ ಸಹಕಾರವನ್ನು ಕೋರುತ್ತಿದೆ. ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ಭಾರತದ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದು, ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ನೀಡುತ್ತಿದೆ. ಅಣು ಮತ್ತು ನ್ಯೂಕ್ಲಿಯರ್ ಫ್ಯೂಶನ್ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಕೈಗಾರಿಕೆಗಳ ಅಡಿಪಾಯವಿದೆ. ಎಲೆಕ್ಟ್ರಾನಿಕ್ಸ್ ಜನರ ಜೀವನವನ್ನು ಬದಲಿಸಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಿದೆ ಎಂದರು.

ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್:
ರಕ್ಷಣಾ ಇಲಾಖೆಯ ಅಭಿವೃದ್ಧಿ ಅವಶ್ಯಕತೆಯನ್ನು ಆಧರಿಸಿದೆ. ಯುದ್ಧಗಳ ನಂತರದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗಿರುವುದನ್ನು ಮೊದಲನೇ ಮತ್ತು ಎರಡನೇ ವಿಶ್ವ ಯುದ್ಧಗಳಲ್ಲಿ ನೋಡಿದ್ದೇವೆ. ರಕ್ಷಣಾ ಮತು ಡಿ.ಆರ್.ಡಿ.ಒ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನಮ್ಮ ದೈನಂದಿನ ಬಳಕೆಯ ವಸ್ತುಗಳಲ್ಲಿ ಕಾಣಬಹುದಾಗಿದ್ದು, ಡಿಆರ್‍ಡಿಒ ಮಾಡುವ ಎಲ್ಲ ಸಂಶೋಧನೆಗಳನ್ನು ನಾವು ಸ್ವಾಗತಿಸಬೇಕು ಎಂದರು. ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸಂಪೂರ್ಣ ಆತ್ಮನಿರ್ಭರ್ ಆಗಬಹುದು. ಇದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸೂ ಹೌದು. ಎಲೆಕ್ಟ್ರಾನ್ ಮಾದರಿಯಲ್ಲಿ ನಮ್ಮ ಸರ್ಕಾರ ಮುಂದುವರೆಲಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button