Belagavi NewsBelgaum NewsKannada NewsKarnataka News

ಕೆಎಲ್ಇ ಆಸ್ಪತ್ರೆಯಲ್ಲಿ 12ನೇ ಹೃದಯ ಕಸಿ; ಈವರೆಗೆ 9 ಲಿವರ್, 76 ಕಿಡ್ನಿ , ಹಾಗೂ 80 ಕಾರ್ನಿಯಾ ಕಸಿ; ದಾನಿಗಳನ್ನು ಸಿಎಂ ಗೌರವಿಸುವಂತಾಗಲಿ – ಡಾ.ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವಿಭಾಗವು 18 ಮತ್ತು 23 ವರ್ಷದ ಇಬ್ಬರು ಯುವಕರಿಗೆ ಯಶಸ್ವಿ ಹೃದಯ ಕಸಿ ನೇರವೇರಿಸಿ ಸಾಧನೆಗೈದಿದೆ.

ಜಮಖಂಡಿ ಮತ್ತು ಹುಕ್ಕೇರಿ ತಾಲೂಕಿನ ಈ ಇಬ್ಬರು ಯುವಕರು ಹೃದಯ ಕಸಿಗೆ ಒಳಗಾಗಿದ್ದಾರೆ. ಇಲ್ಲಿಯವರೆಗೆ 12 ಹೃದಯ ಕಸಿ ಮಾಡಲಾಗಿದೆ. ಹೃದಯ ಕಸಿ ಮಾಡಿಸಿಕೊಂಡವರಲ್ಲಿ 11ನೇಯವರು 18 ವರ್ಷದ ಯುವಕ ಹಾಗೂ 12ನೇಯವರು 25 ವರ್ಷದ ಯುವತಿ. ಉತ್ತರ ಕರ್ನಾಟಕ ಭಾಗದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಒಂದೇ ಬಹುವಿಧ ಅಂಗಾಂಗಳನ್ನು ಕಸಿ ಮಾಡುವ ಕೇಂದ್ರವಾಗಿದೆ.

11ನೇ ಮತ್ತು 12ನೇ ಹೃದಯ ಕಸಿ ರೋಗಿಗಳ ಮಾಹಿತಿ:

ಮೂಡುಬಿದಿರೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜಮಖಂಡಿಯ 18 ವರ್ಷದ ಯುವಕ ಮೆಟ್ಟಿಲು ಹತ್ತಲು ತೊಂದರೆ, ಅಶಕ್ತತೆ, ದೇಹದ ಭಾವು, ಎದೆನೋವಿನಿಂದ ಬಳಲುತ್ತ, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ ಅವರು ಡೈಲೇಟೆಡ್ ಕಾರ್ಡಿಯೊಮಿಯೊಪತಿ ಎಂಬ ರೋಗದಿಂದ ಬಳಲುತ್ತಿದ್ದ ಕಾರಣ, ಹೃದಯದ ಕಾರ‍್ಯ ಕೇವಲ ಶೇ. 14ರಷ್ಟು ಮಾತ್ರ ನಿರ್ವಹಿಸುತ್ತಿತ್ತು. ಇದರಿಂದ ಅವರಿಗೆ ಹೃದಯ ಕಸಿ ಅನಿವಾರ‍್ಯವಾಗಿತ್ತು. ಕಸಿ ಮಾಡಿದ 11ನೇ ರೋಗಿಯಾಗಿರುವ ಇವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ.

ಹುಕ್ಕೇರಿ ಮೂಲದ 25 ವರ್ಷದ ವಿಜ್ಞಾನ ಪದವಿಧರೆಯಾಗಿರುವ ಯುವತಿಯು ಹಸಿವೆಯಾಗದಿರುವದು, ವಾಕರಿಕೆ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಆಸ್ಪತ್ರೆಯಲ್ಲಿ ತಪಾಸಿಸಿದಾಗ ಅವಳೂ ಕೂಡ ಕಾರ್ಡಿಯೋಪಥಿ ರೋಗದಿಂದ ತೊಂದರೆ ಅನುಭವಿಸುತ್ತಿರುವದು ಕಂಡು ಬಂದಿತು. ಅದಕ್ಕೆ ಹೃದಯ ಕಸಿಯೊಂದೆ ಪರಿಹಾರವಾಗಿತ್ತು. ಅದರಿಂದ ಹೃದಯ ಕಸಿ ನೆರವೇರಿಸಲಾಗಿದ್ದು, ಈಗ ಗುಣಮುಖರಾಗಿದ್ದಾರೆ. ಅಲ್ಲದೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ. ಯುವತಿಯ ತಾಯಿ ಮಾತನಾಡಿ, ಬುದ್ದಿಯಂತೆಯಾದ ಇವಳು ಶಿಕ್ಷಣವನ್ನು ಮುಂದುವರೆಸಲು ಬಯಸಿದ್ದು, ಎಂಎಸ್ಸಿ ಪೂರ್ಣಗೊಳಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದಾಳೆ ಎಂದರು.

ದಾನಿಗಳು: ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಮೆದಳು ನಿಷ್ಕ್ರೀಯಗೊಂಡ ಕಾರಣ ಹೃದಯವನ್ನು ದಾನ ಮಾಡಿದ್ದರು. ಇಂಟೆನ್ಸವಿಸ್ಟ, ಕಸಿ ಸಂಯೋಜಕರು, ರಾಜ್ಯ ಅಂಗ ಅಂಗಾಂಶ ಮತ್ತು ಕಸಿ ಸಂಸ್ಥೆಯ ತಂಡಗಳು ಸಮನ್ವಯ ಸಾಧಿಸಿ ದಾನಿಗಳಿಂದ ಅಂಗಾಂಗಳನ್ನು ದಾನ ಪಡೆಯಲಾಯಿತು. ಪೊಲೀಸರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಯ ಸಕಾರಾತ್ಮಕ ಸೇವೆಯ ಪರಿಣಾಮ ಕೆಎಲ್ಇ ಆಸ್ಪತ್ರೆಗೆ ಧಾರವಾಡದಿಂದ ಬೆಳಗಾವಿಗೆ ಕೇವಲ 55 ನಿಮಿಷಗಳ ದಾಖಲೆಯ ಸಮಯದಲ್ಲಿ ಹೃದಯವನ್ನು ಸ್ಥಳಾಂತರಿಸಲಾಯಿತು.

ಆಸ್ಪತ್ರೆಯ ಮುಖ್ಯ ಕಸಿ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ರಿಚರ್ಡ್ ಸಲ್ಡಾನ್ಹಾ ಅವರು ಮಾತನಾಡಿ, ಹೃದಯ ಕಸಿ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕಾರ‍್ಯ. ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರಫ್ಯೂಸನಿಸ್ಟ, ದಾದಿಯರು ಮತ್ತು ತಂತ್ರಜ್ಞರನ್ನು ಒಳಗೊಂಡಿರುವ ತಂಡದ ಪ್ರಯತ್ನ ಮುಖ್ಯವಾಗಿದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ ತಂಡದ ಸದಸ್ಯರ ಪ್ರಯತ್ನವೇ ಕಾರಣ ಎಂದು ಅವರು ಶ್ಲಾಘಿಸಿದರು. ಶೀಘ್ರದಲ್ಲಿಯೇ ಲಂಗ್ಸ್ ಕಸಿ ಕೂಡ ನೆರವೇರಿಸಲಾಗುವದು ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ತಮ್ಮ ಮಕ್ಕಳಿಗೆ ಹೃದಯ ಕಸಿ ಮಾಡುವ ದಿಟ್ಟ ನಿರ್ಧಾರ ಕೈಗೊಂಡ ಕುಟುಂಬಸ್ಥರನ್ನು ಅಭಿನಂದಿಸಿ, ಕಸಿ ಮಾಡಿಸಿಕೊಂಡ ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಅವರ ಮುಂದಿನ ಅಧ್ಯಯನಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ಅಂಗಾಂಗಗಳನ್ನು ದಾನ ಮಾಡಿದ ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದ ಡಾ. ಪ್ರಭಾಕರ ಕೋರೆ ಅವರು, ಅಪರಿಚಿತರೊಬ್ಬರ ಜೀವ ಉಳಿಸಿದ ಕುಟುಂಬ ಹಾಗೂ ದಾನಿಗಳು ಸದಾ ಸ್ಮರಣೀಯರು. ಇದೊಂದು ಪರಮ ತ್ಯಾಗ ಎಂದ ಅವರು, ಆರೋಗ್ಯ ಕರ್ನಾಟಕ-ಆಯುಸ್ಮಾನ್ ಭಾರತ್ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಅಗತ್ಯವಿರುವ ರೋಗಿಗಳಿಗೆ ಹೃದಯ ಕಸಿಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು. ಮೆಟ್ರೋಪಾಲಿಟಿನ್ ನಗರಗಳಲ್ಲಿ ಹೃದಯ ಕಸಿಗೆ 25-30 ಲಕ್ಷ ವೆಚ್ಚವಾಗುತ್ತದೆ. ಆದರೆ ನಮ್ಮಲ್ಲಿ ಕನಿಷ್ಠ ರೂ. 10 ಲಕ್ಷ ರೂ.ಗಳಲ್ಲಿ ನೆರವೇರಿಸಲಾಗುತ್ತದೆ. ಹೆಚ್ಚು ಹೆಚ್ಚು ಜನರು ಅಂಗದಾನದ ಮಹತ್ವವನ್ನು ಅರಿತು ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರುತ್ತಿರುವುದಕ್ಕೆ ಡಾ. ಪ್ರಭಾಕರ ಕೋರೆ ಸಂತಸ ವ್ಯಕ್ತಪಡಿಸಿದರು.

ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರನ್ನು ತಮಿಳುನಾಡಿನಲ್ಲಿ ಸ್ವತಃ ಮುಖ್ಯಮಂತ್ರಿ ಅವರು ಗೌರವಿಸುವಂತೆ ರಾಜ್ಯದಲ್ಲಿ ಗೌರವಿಸುವ ಕಾರ‍್ಯ ನಡೆಯಬೇಕೆಂದು ತಿಳಿಸಿದರು.

ಇದುವರೆಗೆ ಆಸ್ಪತ್ರೆಯಲ್ಲಿ 9 ಲಿವರ್, 76 ಕಿಡ್ನಿ , ಹಾಗೂ 80 ಕಾರ್ನಿಯಾ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಕೆಎಲ್‌ಇ -ರೋಟರಿ ಸ್ಕಿನ್ ಬ್ಯಾಂಕ್ ಅಹಮದಾಬಾದ್, ದೆಹಲಿ, ಬೆಂಗಳೂರಿನಂತಹ ದೂರದ ಸ್ಥಳಗಳಿಗೆ ಚರ್ಮವನ್ನು ಸರಬರಾಜು ಮಾಡಿದೆ ಎಂದು ವಿವರಿಸಿದರು.

ಡಾ.ಆರ್.ಬಿ.ನೇರ್ಲಿ, ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button