ಮಧ್ಯಾಹ್ನ 12ರಿಂದ 4 ಗಂಟೆವರೆಗೆ ಮನೆಯಿಂದ ಹೊರಬರಬೇಡಿ: ಜನತೆಗೆ ತೆಲಂಗಾಣ ಸರಕಾರ ಸೂಚನೆ

ಪ್ರಗತಿ ವಾಹಿನಿ ಸುದ್ದಿ; ಹೈದರಾಬಾದ್: ಏರುತ್ತಿರುವ ತಾಪಮಾನ ಮತ್ತು ಬಿಸಿ ಗಾಳಿ ಬೀಸುತ್ತಿರುವ ಕಾರಣ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜನ ಮನೆಯಿಂದ ಹೊರಬರದಂತೆ ತೆಲಂಗಾಣ ರಾಜ್ಯ ಆರೋಗ್ಯ ಇಲಾಖೆ ಅಲ್ಲಿನ ಜನರಿಗೆ ಸಲಹೆ ನೀಡಿದೆ.
ತೆಲಂಗಾಣದ ಬಹುತೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಹೈದರಾಬಾದ್ ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜನರ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಮಧ್ಯಾಹ್ನ ಉರಿ ಬಿಸಿಲಲ್ಲಿ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತೆಲಂಗಾಣ ಆರೋಗ್ಯ ಇಲಾಖೆ ನಿರ್ದೇಶಕ ಜಿ. ಶ್ರೀನಿವಾಸ ರಾವ್ ಹೇಳಿದ್ದಾರೆ.
ಜನರನ್ನು ಏರುತ್ತಿರುವ ತಾಪಮಾನದ ಪ್ರಬಾವದಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗುರುವಾರ ಹೈದರಾಬಾದ್ನಲ್ಲಿ ಗರಿಷ್ಠ 40.8 ಡಿಗ್ರಿ ಸೆಲ್ಶಿಯಸ್ ಉಷ್ಣತೆ ದಾಖಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಸನ್ ಸ್ಟ್ರೋಕ್ ಕೂಡ ಆಗುವ ಸಂಭವವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಶಾಲೆಗಳ ವೇಳೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ತಾಪಮಾನ ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ವಿಶೇವಾಗಿ ಮಕ್ಕಳ ಆರೋಗ್ಯದ ರಕ್ಷಣೆಗಾಗಿ ಎಲ್ಲ ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಅಗತ್ಯ ನೀರಿನ ವ್ಯವಸ್ಥೆ ಮತ್ತು ಒಆರ್ಎಸ್ ಪೂರೈಕೆ ಮಾಡಲಾಗಿದೆ ಎಂದು ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ; ಸಿದ್ಧಗಂಗಾ ಶ್ರೀ ಸ್ಮರಿಸಿದ ಕೇಂದ್ರ ಗೃಹ ಸಚಿವ



