Kannada NewsKarnataka NewsLatest

ಅಮ್ಮನಿಗಾಗಿ ಕಾಯುತ್ತಿದೆ 2 ತಿಂಗಳ ಕಂದಮ್ಮ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಫೆ.೧೪ ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಫೆಬ್ರುವರಿ ೧೪ ರಂದು ಮಧ್ಯಾಹ್ನ ೧೨ ಗಂಟೆಯಿಂದ ೨ ಗಂಟೆಯವರೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಇದಕ್ಕೆ ಸಂಬಂಧಪಟ್ಟ ಸಮಸ್ಯೆ, ಕುಂದು ಕೊರತೆಗಳಿದ್ದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. ೧೫ ರಂದು ೩ನೇ ತ್ರೈಮಾಸಿಕ ಸಭೆ

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿಯ (ದಿಶಾ) ೩ ನೇ ತ್ರೈಮಾಸಿಕ ಸಭೆಯನ್ನು ಫೆಬ್ರುವರಿ ೧೫ ರಂದು ಬೆಳಗ್ಗೆ ೯ ಗಂಟೆಗೆ ಸುವರ್ಣಸೌಧದ ಕಾನ್ಫೆರೆನ್ಸ್ ಹಾಲ್ ರೂ. ನಂ ೩೫೪, ೩ನೇ ಮಹಡಿಯಲ್ಲಿ ಆಯೋಜಿಸಲಾಗಿದೆ.

ವಿದ್ಯುತ್ ಅದಾಲತ್ ಹಾಗೂ ಗ್ರಾಹಕರ ಕುಂದು ಕೊರತೆ ಸಭೆ ಫೆ.೧೫ ರಂದು

ಫೆಬ್ರುವರಿ ೧೫ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ಅದಾಲತ್ ಹಾಗೂ ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಗ್ರಾಹಕರ ಕುಂದು ಕೊರತೆ ಸಭೆಗಳನ್ನು ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪವಿಭಾಗ ನಂ.೧, ನೆಹರು ನಗರ ಕಚೇರಿಯಲ್ಲಿ, ಹುವಿಸಕಂನಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪವಿಭಾಗ ನಂ.೨, ಗಾಂಧಿ ನಗರ ಇವರ ಕಚೇರಿಯಲ್ಲಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಕಾರ್ಯ ಮತ್ತು ಪಾಲನೆ ಉಪವಿಭಾಗ, ಹುವಿಸಕಂನಿ., ಖಾನಾಪುರ ಇವರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಬೆಳಗಾವಿ (ಗ್ರಾಮೀಣ ಭಾಗದ) ಹಾಗೂ ಖಾನಾಪೂರ ತಾಲೂಕಿನ ವಿದ್ಯುತ್ ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಸದರಿ ಕಚೇರಿಗಳಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸುವುದು ಹಾಗೂ ಸದರಿ ದಿನದಂದು ಖುದ್ದಾಗಿ ಹಾಜರಿದ್ದು ತಮ್ಮ ಸಮಸ್ಯೆಗಳನ್ನು
ಪರಿಹರಿಸಿಕೊಳ್ಳಬೇಕು ಎಂದು ಹುವಿಸಕಂನಿ ಕಾ ಮತ್ತು ಪಾ ಗ್ರಾಮೀಣ ವಿಭಾಗ ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್ಯ ವೈಶ್ಯ ಸಮುದಾಯ: ಸಾಲ-ಸೌಲಭ್ಯ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ

ಆರ್ಯ ವೈಶ್ಯ ಜನಾಂದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು ವಿದ್ಯಾಭ್ಯಾಸದ ಸಲುವಾಗಿ ೧೮ ವರ್ಷ ಒಳಪಟ್ಟವರಿಗೆ ಮಾತ್ರ ನೀಡಲಾಗುತ್ತಿತ್ತು, ೧೬-೧೨-೨೦೧೯ ರಂದು ಕರ್ನಾಟಕ ರಾಜ್ಯ ಸರ್ಕಾರವು ಇನ್ಮುಂದೆ ಆರ್ಯ ವೈಶ್ಯ ಜನಾಂದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ-ಜಿ ಯಲ್ಲಿ ಪಡೆಯಲು ಆದೇಶಿಸಿರುತ್ತದೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.
ಆರ್ಯ ವೈಶ್ಯ ಸಮುದಾಯದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ-ಜಿ ಯಲ್ಲಿ ಪಡೆಯಲು ನಾಡಕಚೆರಿ ಕೇಂದ್ರ, ಬೆಂಗಳೂರು-ಒನ್, ಕರ್ನಾಟಕ-ಒನ್, ಹಾಗೂ ನಾಡಕಚೇರಿಯ ವೆಬ್‌ಸೈಟ್  ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ದೂರವಾಣಿ ಸಂಖ್ಯೆ ೯೪೪೮೪೫೧೧೧೧ ಹಾಗೂ ನಾಡಕಚೇರಿಯ ದೂರವಾಣಿ ಸಂಖ್ಯೆ ೧೮೦೦೫೯೯೦೦೪೪ ಗೆ ಸಂಪರ್ಕಿಸಬೇಕು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಎಲ್ಲರೂ ಪಾಲಿಸಬೇಕಾದ ಅವಶ್ಯಕತೆ ಇದೆ: ಡಾ. ಸಂಜಯ

ಸಮಾಜದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳದಿದ್ದರೆ ಸಮಾಜದಲ್ಲಿ ಸ್ತ್ರಿ ಪುರುಷರ ಲಿಂಗಾನುಪಾತದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದು ಸಮಾಜದ ಸ್ಥಿತಿಗತಿ ಏರುಪೇರಾಗಿ ನಾವು ತುಂಬಾ ಕ್ಲಿಷ್ಟಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಸಲಹಾ ಸಮಿತಿ ಪಿ.ಸಿ ಮತ್ತು ಪಿಎನ್‌ಡಿಟಿ ಅಧ್ಯಕ್ಷರಾದ ಡಾ.ಸಂಜಯ ಹೊಸಮಠ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರ ಮತ್ತು ಸಲಹಾ ಸಮಿತಿ ಪಿ.ಸಿ ಮತ್ತು ಪಿಎನ್‌ಡಿಟಿ ಬೆಳಗಾವಿ ಇವರುಗಳ ಸಂಯುಕ್ತಾಶ್ರಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಚರ್ಚಾಸ್ಪರ್ಧೆಯನ್ನು ಇತ್ತಿಚೇಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬಿಮ್ಸ್) ನಲ್ಲಿ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಶಶಿಕಾಂತ ಮುನ್ಯಾಳ ಅವರು ಬಹುಮಾನಗಳನ್ನು ವಿತರಿಸಿ, ಸದೃಡ ಸಮಾಜ, ಸದೃಡವಾದ ಸಂಸ್ಕೃತಿ, ಸಂಸ್ಕಾರ ಹಾಗೂ ಸದೃಡವಾದ ದೇಶದ ನಿರ್ಮಾಣಕ್ಕಾಗಿ ಹಾಗೂ ಉತ್ತಮವಾದ ಆರೋಗ್ಯಕ್ಕಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ನುಡಿದರು.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶೈಲಜಾ ತಮ್ಮಣ್ಣವರ ಮಾತನಾಡಿ, ಈ ದೇಶದಲ್ಲಿ ಗಂಡು ಹೆಣ್ಣು ಲಿಂಗಾನುಪಾತದ ವ್ಯತ್ಯಾಸದಿಂದಾಗಿ ಅತ್ಯಾಚಾರ, ಅಸಮಾನತೆ, ವರದಕ್ಷಣೆ ಕಿರುಕುಳ ಉಂಟಾಗಿ ಸಮಾಜದ ಮೇಲೆ ದುಷ್ಪರಿನಾಮಗಳು ಉಂಟಾಗುತ್ತವೆ ಸಮಾಜದಲ್ಲಿ ಹೆಣ್ಣು ಮಗುವಿನ ಮಹತ್ವದ ಬಗ್ಗೆ ತಿಳಿಸಬೇಕೆಂದು ಹೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಸಾವಿತ್ರಿ ಬೆಂಡಿಗೇರಿ ಮಾತನಾಡಿ, ಇಂದಿನ ಯುವಜನತೆಯೇ ಈ ದೇಶದ ಬೆನ್ನಲುಬಗಳಾಗಿದ್ದಾರೆ. ಅದಕ್ಕಾಗಿ ಅವರಿಗೆ ಪಿ.ಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ಅರಿವು ಅನಿವಾರ್ಯ ಈ ಕಾಯ್ದೆಯ ಪಾಲನೆ ಯುವಕರ ಹೆಗಲ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಹೀಲಾ ಶೇಖ, ಶ್ರೀಮಂತ ಪಾಟೀಲ ಹಾಗೂ ಪಿ.ಸಿ ಮತ್ತು ಪಿಎನ್‌ಡಿಟಿ ಜಿಲ್ಲಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಚಿಕ್ಕೋಡಿ ಉಪನೋಂದಣಿ ಕಚೇರಿಯ ವ್ಯಾಪ್ತಿಗೆ ಬರುವ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ೨೦೧೯-೨೦೨೦ ನೇ ಸಾಲಿಗೆ ಜಾರಿಗೆ ಬರುವಂತೆ ಚಿಕ್ಕೋಡಿಯ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಫೆಬ್ರುವರಿ ೧೨ ರಂದು ನಡೆದ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿ ಸಭೆಯಲ್ಲಿ ನಿರ್ಧರಿಸಿ ಪರಿಷ್ಕರಿಸಲಾಗಿದೆ.
ಬೆಲೆ ಪಟ್ಟಿಯ ಕರಡು ಪ್ರತಿಯನ್ನು ಸಾರ್ವಜನಿಕ ಮಾಹಿತಿಗಾಗಿ ಹಾಗೂ ಆಕ್ಷೇಪಣೆಗಾಗಿ ಉಪನೋಂದಣ ಕಚೇರಿಯಲ್ಲಿ ಪ್ರಚುರಪಡಿಸಲಾಗಿದೆ. ಸದರಿ ಮಾರ್ಗಸೂಚಿ ಬೆಲೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳೆನಾದರೂ ಇದ್ದಲ್ಲಿ ಪ್ರಕಟಣೆ ಹೊರಡಿಸಿದ ೭ ದಿನಗಳ ಒಳಗಾಗಿ ಉಪನೋಂದಣ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕು ಎಂದು ಚಿಕ್ಕೋಡಿಯ ಸದಸ್ಯ ಕಾರ್ಯದರ್ಶಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪ ಸಮಿತಿಯ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮ್ಮನಿಗಾಗಿ ಕಾಯುತ್ತಿದೆ 2 ತಿಂಗಳ ಹೆಣ್ಣು ಮಗು

ಜನವರಿ ೧೨ ರಂದು ಬೆಳಗಾವಿ ನಗರದ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಅಂಗಡಿ ಬಳಿ ಬಾಕ್ಸ್‌ನಲ್ಲಿ ೨ ತಿಂಗಳ ಹೆಣ್ಣು ಮಗುವನ್ನು ಅಪರಿಚಿತರು ಮುಚ್ಚಿಟ್ಟು ಹೊಗಿದ್ದು ಸ್ಥಳಿಯರು ಕ್ಯಾಂಪ್ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ನಂತರ ಕ್ಯಾಂಪ್ ಪೋಲಿಸ್ ಠಾಣೆಯ ಸಿಬ್ಬಂದಿ  ಸ್ಥಳಕ್ಕೆ ಆಗಮಿಸಿ ಮಗುವನ್ನು ರಕ್ಷಣೆ ಮಾಡಿ ಮಗುವಿನ ಆರೋಗ್ಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಸದ್ಯ ಮಗುವಿನ ಆರೋಗ್ಯ ಸುಧಾರಣೆಯಾಗಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಅವರು ತಾತ್ಕಾಲಿಕವಾಗಿ ರಕ್ಷಣೆ ಮತ್ತು ಪೋಷಣೆಗಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಸ್ವೀಕಾರ ಕೇಂದ್ರ ಬೆಳಗಾವಿಯಲ್ಲಿ ಅಭೀರಕ್ಷಣೆಗಾಗಿ ಇಡಲಾಗಿದೆ.
ಮಗುವಿನ ಜೈವಿಕ ಪಾಲಕರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿಂದುಗಡೆ ಶಿವಂ ರೆಸಿಡೆನ್ಸಿ ಎದುರುಗಡೆ, ಶಾರದಾ ಎನ್‌ಕ್ಲೇವ್ ಪ್ಲಾಟ್ ನಂ.೨೫೫, ಸಿ.ಟಿ.ಎಸ್.ನಂ.೯೨೧೬ ೧ನೇ ಮಹಡಿ, ಶಿವಬಸವ ನಗರ, ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೭೪೧೧೧ ಗೆ ಸಂಪರ್ಕಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button