*7ನೇ ವೇತನ ಆಯೋಗ ವರದಿ ಜಾರಿಗೆ ಸರ್ಕಾರ ಸಿದ್ಧತೆ*
![](https://pragativahini.com/wp-content/uploads/2022/06/Vidhana-Soudha.jpg)
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ 7ನೇ ವೇತನ ಆಯೋಗ ವರದಿ ಜಾರಿಗೆ ಮುಂದಾಗಿದೆ ಎನ್ನುವ ಮಾಹಿತಿ ಬಂದಿದೆ.
ಚುನಾವಣಾ ಫಲಿತಾಂಶ ಪ್ರಕಟವಾಗಿ ನೀತಿ ಸಂಹಿತೆ ಸಡಿಲವಾಗುತ್ತಿದ್ದಂತೆ ಸರ್ಕಾರಿ ನೌಕರರ ವೇತನ ಪರೀಷ್ಕರಣೆ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳ ಅನುಷ್ಠಾನಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.
ನೀತಿ ಸಂಹಿತೆ ಜಾರಿಗೆ ಒಂದು ದಿನ ಮೊದಲು 7ನೇ ವೇತನ ಆಯೋಗ ವರದಿ ಸರ್ಕಾರದ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ 7ನೇ ವೇತನ ಆಯೋಗ ವರದಿ ಪರಿಶೀಲನೆ ವಿಳಂಬವಾಗಿತ್ತು. ಈಗ ನೀತಿ ಸಂಹಿತೆ ಸಡಿಲವಾಗುತ್ತಿದ್ದಂತೆ ವರದಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಮಾರ್ಚ್ 16ರಿಂದ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಮುಂಬರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮುಗಿಯುವವರೆಗೆ ಜೂನ್ 6ರವರೆಗೆ ಜಾರಿಯಲ್ಲಿರಲಿದೆ. ಜೂನ್ 6ರಂದು ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಆದೇಶಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹಣಕಾಸು ಇಲಾಖೆ ತಿಳಿಸಿದೆ ಎಂದು ಮಾಹಿತಿ ಸಿಕ್ಕಿದೆ.