Kannada NewsLatestUncategorized

*ಬೆಳಗಾವಿ ಬಳಿ ಗೋಲ್ಡ್ ಕ್ಲಾಸ್ ಕೆಟಗರಿಯ ವಿಶೇಷ ಕೈಗಾರಿಕಾಭಿವೃದ್ಧಿ ಪ್ರದೇಶ ಸ್ಥಾಪನೆ-ಸಚಿವ ಮುರುಗೇಶ್ ನಿರಾಣಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದ ಹೊರವಲಯದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 700 ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ಒದಗಿಸಿದರೆ, ರಾಜ್ಯ ಸರ್ಕಾರದಿಂದ ಪರ್ಯಾಯವಾಗಿ ಖಾನಾಪುರ ತಾಲೂಕಿನಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ರಕ್ಷಣಾ ಇಲಾಖೆಗೆ ಒದಗಿಸಲಾಗುವುದು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬೆಳಗಾವಿ ದಕ್ಷಿಣಕ್ಷೇತ್ರದ ಶಾಸಕ ಅಭಯ್ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿದರು, ಇತ್ತೀಚೆಗೆ ನಡೆದಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬೆಂಗಳೂರಿನ ಆಚೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಹೆಚ್ಚು ಪ್ರೋತ್ಸಾಹ, ಸೌಕರ್ಯಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಫೌಂಡ್ರಿ, ಮಿಷನ್ ಕಾಂಪೊನೆಂಟ್ಸ್, ಸಿಮೆಂಟ್, ಸಕ್ಕರೆ, ಬೆಲ್ಲ, ಜನರಲ್ ಇಂಜಿನಿಯರಿಂಗ್, ಜವಳಿ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳು 52 ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ.
ಹೊನಗಾ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಗೋಲ್ಡ್ ಗ್ಲಾಸ್‍ ಕಂಪೆನಿಯು ಮೊದಲ ಹಂತದಲ್ಲಿ 2500 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ, 8 ತಿಂಗಳ ಅವಧಿಯಲ್ಲಿ ಘಟಕ ಸ್ಥಾಪನೆ ಮಾಡಿದೆ. ರಷ್ಯಾ ಮೂಲದ ಇಲೆಕ್ಟ್ರಿಕಲ್ ವಾಹನ ಉದ್ಯಮ ಸಂಸ್ಥೆಯೊಂದು ಬೆಂಗಳೂರಿನಲ್ಲಿ ಬೃಹತ್‍ ಘಟಕ ಸ್ಥಾಪಿಸಲು ಇಚ್ಛೆ ವ್ಯಕ್ತಪಡಿಸಿ ಮುಂದೆ ಬಂದಿದೆ. ಎರಡನೇ ಹಂತದ ನಗರಗಳಾಗಿರುವ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿಯಂತಹ ನಗರಗಳಲ್ಲಿ ಸ್ಥಾಪಿಸಲು ಅವರಿಗೆ ಸಲಹೆ ನೀಡಲಾಗಿದೆ. ಬೆಳಗಾವಿ ಬಳಿ ಗೋಲ್ಡ್ ಕ್ಲಾಸ್ ಕೆಟಗರಿಯ ವಿಶೇಷ ಕೈಗಾರಿಕಾಭಿವೃದ್ಧಿ ಪ್ರದೇಶ ಸ್ಥಾಪಿಸಿ, ಗಡಿ ಭಾಗದ ಯುವಜನರಿಗೆ ಉದ್ಯೋಗ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಸಚಿವರು ತಿಳಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ಮಾದರಿಯಲ್ಲಿಯೇ ಗಡಿಭಾಗಗಳಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ವಿಶೇಷ ಸೌಕರ್ಯಗಳನ್ನು ಸರ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಬೆಳಗಾವಿ ಸಮೀಪದ 700 ಎಕರೆ ರಕ್ಷಣಾ ಭೂಮಿಯಲ್ಲಿ ಐಟಿ ಉದ್ಯಮಗಳನ್ನು ಸ್ಥಾಪಿಸಿದರೆ ಈ ಭಾಗದ ಯುವ ಇಂಜಿನಿಯರಿಂಗ್ ಪದವೀಧರರು ಪುಣೆ ಹಾಗೂ ಬೆಂಗಳೂರಿಗೆ ವಲಸೆ ಹೋಗುವುದು ತಪ್ಪುತ್ತದೆ.ಸ್ಥಳೀಯವಾಗಿ ಉದ್ಯೋಗಗಳು ಸೃಜನೆಯಾಗುತ್ತವೆಎಂದರು.
ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಕಾಟನ್ ಮಿಲ್, ಜವಳಿ ಉದ್ಯಮಗಳನ್ನು ಸ್ಥಾಪಿಸಬೇಕು ಎಂದರು.
ಬೀದರ್ ದಕ್ಷಿಣ ಶಾಸಕ ಬಂಡೆಪ್ಪಕಾಶೆಂಪೂರ ಮಾತನಾಡಿ, ಕೇಂದ್ರ ಸರ್ಕಾರವು ಒಂದು ಜಿಲ್ಲೆ ಒಂದು ಬೆಳೆ ಕಾರ್ಯಕ್ರಮದಡಿ ಬೀದರ್‍ ಜಿಲ್ಲೆಯ ಶುಂಠಿ ಬೆಳೆ ಗುರುತಿಸಿದೆ.ಶುಂಠಿಯ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದರು.
https://pragati.taskdun.com/aditional-coaches-for-trains/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button