Latest

ಪಾಕಿಸ್ತಾನ, ಚೀನಾ ನಾಗರಿಕರಿಗೂ ಮೋದಿ ಮೆಚ್ಚುಗೆ; ಪ್ರಧಾನಿ ಮೋದಿ ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಪ್ರಧಾನಿ ಮೋದಿಯವರನ್ನು ಇಂದು ಪ್ರಪಂಚವೇ ವಿಶ್ವ ನಾಯಕ ಎಂದು ಶ್ಲಾಘಿಸುತ್ತಿದೆ. ಪಾಕಿಸ್ತಾನ, ಚೀನಾ ನಾಗರಿಕರಿಗೂ ಮೋದಿ ಮೆಚ್ಚುಗೆಯಾಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

Related Articles

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಲೊಕಾರ್ಪಣೆ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮೋದಿಯವರನ್ನು ವಿರೋಧಿ ರಾಷ್ಟ್ರಗಳಲ್ಲಿನ ಜನರು ಒಪ್ಪಿಕೊಂಡಿದ್ದಾರೆ. ಮೋದಿ ರೀತಿಯ ನಾಯಕ ಬೇಕು ಎಂದು ಪಾಕಿಸ್ತಾನದ ಜನತೆ ಕೂಡ ಹೇಳುತ್ತಿದ್ದಾರೆ. ಅಮೆರಿಕಾ ಪ್ರಜೆಗಳಿಂದಲೂ ಮೋದಿಯವರಿಗೆ ಬಹುಪರಾಕ್ ಹೇಳಲಾಗಿದೆ. ಪ್ರಧಾನಿ ಮೋದಿಯವರನ್ನು ವಿಶ್ವನಾಯಕ ಎಂದು ಕರೆಯಲಾಗುತ್ತಿದೆ ಎಂದು ಮೋದಿ ನಾಯಕತ್ವವನ್ನು ಬಣ್ಣಿಸಿದರು.

ಇದೇ ವೇಳೆ ದಶಪಥ ರಸ್ತೆ ಕ್ರೆಡಿಟ್ ವಾರ್ ವಿಚಾರವಾಗಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಸಿಎಂ, ಪಕ್ಕದ ಮನೆಯಲ್ಲಿ ಗಂಡು ಹಡೆದರೆ ಪೇಡ ಕೊಡ್ತಾರೆ. ಹಲವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಪೇಪರ್ ನಲ್ಲಿ ಆಡ್ ಕೊಟ್ಟು ರಸ್ತೆ ನಾವು ಮಾಡಿದ್ದು ಎಂದರು. ಈ ರೀತಿ ಸುಳ್ಳು ಪ್ರಚಾರಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಹೆಸರು ಹೇಳದೇ ಗುಡುಗಿದರು.

ಬೆಂಗಳೂರು-ಮೈಸೂರು ಹೈವೇ ಪ್ರಧಾನಿ ಮೋದಿಯವರು ಮಾಡಿಸಿದ ರಸ್ತೆ. ಈ ಕೊಡುಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ್ದು. ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಡ್ಯದ ಮೈಶುಗರ್ ಕಾರ್ಕಾನೆ ಪುನರಾರಂಭ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಡ ಜನರ ಬದುಕು ಸುಧಾರಣೆಯಾಗುವಂತೆ ಮಾಡಿದ್ದೇವೆ. ಬೇರೆ ಪಕ್ಷಗಳ ರಿಪೋರ್ಟ್ ಕಾರ್ಡ್ ನೋಡಿ ಬಿಜೆಪಿ ಮಾಡಿರುವ ಜನಪರ ಸಾಧನೆಯನ್ನು ನೋಡಿ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button