Latest

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದವರಿಗೇ ಈ ಗತಿ, ಬಿಜೆಪಿ ಕಾರ್ಯಕರ್ತರು ಕಂಗಾಲ್; ಇವೆಲ್ಲ ಆಪರೇಶನ್ ಕಮಲದ ಪರಿಣಾಮವೇ?

ಏನೇ ಆದರೂ ಮೂಲ ಕಾರ್ಯಕರ್ತರನ್ನು, ಪಕ್ಷಕ್ಕಾಗಿ ದುಡಿದ ನಾಯಕರನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದರೆ ಪಕ್ಷಕ್ಕೆ ಇಂತಹ ದುರ್ಗತಿ ಬರುತ್ತಿರಲಿಲ್ಲ.

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್, ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಪರಿಸ್ಥಿತಿ ಕಂಡು ಬಿಜೆಪಿ ಕಾರ್ಯಕರ್ತರು ಅಕ್ಷರಶಃ ಕಂಗಾಲ್ ಆಗಿದ್ದಾರೆ. ಅವರಿಗೆಲ್ಲ ಅಭದ್ರತೆ ಕಾಡುತ್ತಿದೆ.

ಇಂತವರಿಗೇ ಈ ಗತಿ ಬಂದಿದೆ, ಇನ್ನು ನಮ್ಮಂತ ಸಾಮಾನ್ಯ ಕಾರ್ಯಕರ್ತರ ಗತಿ ಏನು? ಬಿಜೆಪಿ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುತ್ತದೆ, ಪಕ್ಷ ನಿಷ್ಠೆಗೆ ಬೆಲೆ ಕೊಡುತ್ತದೆ ಎಂದೆಲ್ಲ ಹೇಳುತ್ತ ಕೆಲಸ ಮಾಡುತ್ತಿದ್ದ ನಮಗೆ ಭವಿಷ್ಯ ಇದೆಯೇ? -ಇದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಜಗದೀಶ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿ ಜೊತೆಗೆ ಅವರವರ ಪ್ರದೇಶದ ಸಾವಿರಾರು ಕಾರ್ಯಕರ್ತರಿದ್ದಾರೆ. ತಾವು ನಂಬಿದ್ದ ನಾಯಕನಿಗೆ ಈ ರೀತಿಯಾದರೆ ನಾವು ಪಕ್ಷದಲ್ಲಿ ಹೇಗೆ ಕೆಲಸ ಮಾಡುವುದು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಅಕ್ಷರಶಃ ಅವರ ಮೂಡ್ ಆಫ್ ಆಗಿದೆ. ಈ ಚುನಾವಣೆಗೆ ಹೇಗೆ ಕೆಲಸ ಮಾಡುವುದು ತೋಚದೆ ತಲೆ ಮೇಲೆ ಕೈ ಹೊತ್ತಿದ್ದಾರೆ.

Home add -Advt

ಬೆಳಗಾವಿಯ ಬಿಜೆಪಿಯ ಪ್ರಮುಖ ಪದಾಧಿಕಾರಿಯೊಬ್ಬರು, ನಾನು ಲಕ್ಷ್ಮಣ ಸವದಿ ಅವರನ್ನು ಬಹಳ ನಿಷ್ಠೆಯಿಂದ ಫಾಲೋ ಮಾಡ್ತಿದ್ದೆ. ಅವರು ಪಕ್ಷ ಬಿಟ್ಟು ಹೋಗುತ್ತಾರೆ, ಅವರಿಗೆ ಟಿಕೆಟ್ ತಪ್ಪುತ್ತದೆ ಎನ್ನುವುದನ್ನು ಕನಸು, ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಈಗ ನಮ್ಮಂತವರಿಗೆ ಇನ್ ಸೆಕ್ಯುರ್ ಫೀಲಿಂಗ್ ಬರ್ತಾ ಇದೆ. ಇಷ್ಟೆಲ್ಲ ದುಡಿದು ಏನಪ್ಪ ಮುಂದೆ ಎನ್ನುವ ಯೋಚನೆ ಬರುತ್ತದೆ ಎಂದರು.

ಆಪರೇಶನ್ ಪರಿಣಾಮ?

ಬಿಜೆಪಿ ತನ್ನ ಮೂಲ ತತ್ವ, ಸಿದ್ಧಾಂತಗಳಿಂದಲೇ ಮುಂದುವರಿಯುತ್ತಿದ್ದರೆ ಇಂತಹ ಸ್ಥಿತಿಗೆ ತಲುಪುತ್ತಿರಲಿಲ್ಲವೇನೋ… ಸರಕಾರ ರಚಿಸುವ ದುರಾಸೆಗೆ ಬಿದ್ದು ಆಪರೇಶನ್ ಕಮಲದ ಹಾದಿ ತುಳಿದಾಗಿನಿಂದಲೇ ಬಿಜೆಪಿ ಮನೆ ಮೂಲ ಕಾರ್ಯಕರ್ತರಿಗೆ ಇನ್ ಸೆಕ್ಯುರ್ ಫೀಲಿಂಗ್ ತಂದು ಬಿಟ್ಟಿದೆ. ಮೂಲ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸಿ, ಹೊರಗಿನಿಂದ ಬಂದವರಿಗೆ ಯಾವಾಗ ಆದ್ಯತೆ ಸಿಗಲಿ ಆರಂಭವಾಯಿತೋ ಆಗಲೇ ಅಲುಗಾಡಲು ಆರಂಭವಾಯಿತು. ಅದು ಇಂದು ಈ ಹಂತಕ್ಕೆ ತಲುಪಿದೆ. ಏನೇ ಆದರೂ ಮೂಲ ಕಾರ್ಯಕರ್ತರನ್ನು, ಪಕ್ಷಕ್ಕಾಗಿ ದುಡಿದ ನಾಯಕರನ್ನು ಬಿಟ್ಟುಕೊಡುವುದಿಲ್ಲ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದರೆ, ಅಂತಹ ಸಂದೇಶ ಕಳುಹಿಸಿದ್ದರೆ ಪಕ್ಷಕ್ಕೆ ಇಂತಹ ದುರ್ಗತಿ ಬರುತ್ತಿರಲಿಲ್ಲ.

https://pragati.taskdun.com/former-chief-minister-jagdish-shettar-resigns-from-bjp/

Related Articles

Back to top button