Kannada NewsKarnataka NewsLatest

*ದೇವರಾಜ ಅರಸು ಹಿಂದುಳಿದ ವರ್ಗಗಳ ಆಶಾಕಿರಣ: ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ನಾಯಕ, ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕ ಹಾಗೂ ಸಮಾಜದಲ್ಲಿ ಶೋಷಿತ ವರ್ಗ, ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಜನರ ಸಬಲೀಕರಣದ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಿದವರು ಡಿ. ದೇವರಾಜ ಅರಸು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಹಾಗೂ ಮಹಾನರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ (ಆ.20) ಏರ್ಪಡಿಸಲಾಗಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇವರಾಜ ಅರಸು ಸಾಮಾಜಿಕ ನ್ಯಾಯ, ಸಾಮಾಜಿಕ ಕಳಕಳಿ, ಹಿಂದುಳಿದ ವರ್ಗಗಳ, ಬಡವರಿಗೆ ಆಶ್ರಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು, ಮೈಸೂರು ರಾಜ್ಯವನ್ನು ಕರ್ನಾಟಕ ರಾಜವನ್ನಾಗಿ ಮರು ನಾಮಕರಣ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆಸೀಫ್ ಸೇಠ್, “ರಾಜ್ಯ ಕಂಡ ಧೀಮಂತ ನಾಯಕ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳು ಡಿ. ದೇವರಾಜ ಅರಸು. ಯಾವುದೇ ಜಾತಿ, ಧರ್ಮಭೇದ ಮಾಡದೇ ಸಮಾಜದಲ್ಲಿರುವ ಎಲ್ಲ ಜನರ ಏಳಿಗೆಗಾಗಿ ಶ್ರಮಿಸಿದರು” ಎಂದು ಹೇಳಿದರು.

ಯಾವುದೇ ವರ್ಗದ ಮಕ್ಕಳು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಕ್ಕಳಿಗೆ ವಸತಿ ನಿಲಯಗಳನ್ನು ಕಲ್ಪಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೀಶ್ ಕೆ. ಪಾಟೀಲ, ದೇವರಾಜ ಅರಸು ಅವರು ಶಿಕ್ಷಣದ ಮೂಲಕ ಎಲ್ಲರ ಏಳಿಗೆ ಆಗಬೇಕೆಂಬ ಆಸೆಯನ್ನು ಹೊಂದಿದ್ದರು. ಅವರನ್ನು ಇಡೀ ರಾಜ್ಯ, ದೇಶ ಹೇಗೆ ನೆನಪಿಟ್ಟುಕೊಳ್ಳುತ್ತಿಯೋ ಅದೇ ರೀತಿಯಲ್ಲಿ ನಿಮ್ಮನ್ನು ಸಹ ನೆನಪಿಟ್ಟುಕೊಳ್ಳುವಂತಹ ಸಾಧನೆಯನ್ನು ಮಕ್ಕಳೆಲ್ಲರೂ ಮಾಡಬೇಕೆಂದು ಕಿವಿಮಾತು ಹೇಳಿದರು.

ಮಕ್ಕಳು ದೊಡ್ಡ ದೊಡ್ಡ ಗುರಿ, ಕನಸು ಕಾಣಬೇಕು. ಅದರಂತೆ ನಿಮ್ಮ ಗುರಿ ಕನಸುನ್ನು ಪ್ರತಿನಿತ್ಯ ನೆನಪಿಸಿವುದರ ಜೊತೆಗೆ ಸತತ ಪ್ರಯತ್ನ, ಏಕಾಗ್ರತೆ ಮತ್ತು ದೃಷ್ಟಿಕೋನ ಈ ಮೂರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪ್ರತಿದಿನ 6 ರಿಂದ 8 ಗಂಟೆಗಳವರಗೆ ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಗುರಿ ಸಾಧಿಸುವುದು ಸುಲಭ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಗ. ಗಾರ್ಗಿ ಅವರು, “ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲೊಬ್ಬರು ಡಿ. ದೇವರಾಜ ಅರಸು. ಅವರ ಜನ್ಮದಿನ ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು, ಅವರ ಆಸೆಯಂತೆ ಆಳರನ್ನು ಅರಸರನ್ನಾಗಿ ಮಾಡಿದರು. ಹಿಂದುಳಿದ ವರ್ಗದವರ ಹಾಗೂ ಬಡವರ ಜೀವನೋದ್ಧಾರವಾಗುವಂತಹ ಕೆಲಸವನ್ನು ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದರು” ಎಂದು ಬಣ್ಣಿಸಿದರು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಿಗಮ ಸ್ಥಾಪನೆ; ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶುಲ್ಕ ವಿನಾಯಿತಿ ನೀಡಿ ಹಿಂದುಳಿದ ವರ್ಗದ ಜನರ ಶೈಕ್ಷಣಿಕ ಅಭಿವೃದ್ಧಿಗೆ ಡಿ.ದೇವರಾಜ್ ಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಬೆಳಗಾವಿ ಅಪರಾಧ ವಿಭಾಗ ಡಿಸಿಪಿ ಸ್ನೇಹಾ ಪಿ.ವಿ., ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸುಪ್ರಿಯಾ ಬಿ.ಕಡೇಚೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಶಾಲಾ ಕಾಲೇಜಿನ ಮಕ್ಕಳು ಉಪಸ್ಥಿತರಿದ್ದರು.

ಭಾವಚಿತ್ರದ ಭವ್ಯ ಮೆರವಣಿಗೆ:

ಇದಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ನಿಮಿತ್ಯ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button