Politics

*ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮುಡಾ ಅಕ್ರಮದ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ಕಾಲದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

ಚನ್ನಪಟ್ಟಣದ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, ಮೂಡ ಹಗರಣ ವಿರೋಧಿಸಿ ಬಿಜೆಪಿಯಿಂದ ಸಿಎಂ ಮನೆಗೆ ಮುತ್ತಿಗೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಕಾಲದಲ್ಲಿ ಯಾವ ಹಗರಣಗಳೂ ನಡೆದಿಲ್ಲ. “ಎಲ್ಲಾ ಹಗರಣಗಳು ನಡೆದಿರುವುದು ಬಿಜೆಪಿ ಕಾಲದಲ್ಲಿ. ಅವರ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಬೇಬಿ ಬೆಟ್ಟದಲ್ಲಿ ಪ್ರಯೋಗಾತ್ಮಕ ಸ್ಫೋಟದ ಬಗ್ಗೆ ಕೇಳಿದಾಗ “ಕೆಆರ್ ಎಸ್ ಅಣೆಕಟ್ಟಿನಲ್ಲಿ ಸ್ಫೋಟ ಮಾಡುವುದಿಲ್ಲ. ಏನೇನು ಸುರಕ್ಷತ ಕ್ರಮಗಳನ್ನು ತೆಗೆದುಕೊಂಡು ಸ್ಫೋಟ ಮಾಡಲಾಗುತ್ತದೆ. ಇಂತಿಷ್ಟು ದೂರ ಎಂಬುದು ಇರುತ್ತದೆ” ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಮಂಡ್ಯದಲ್ಲೂ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ ನಿಮನ್ನು ನೋಡಿ ನಕಲು ಮಾಡುತ್ತಿದ್ದಾರೆಯೇ ಎಂದಾಗ “ಮಾಡಲಿ, ಒಳ್ಳೆಯ ಕೆಲಸ ಯಾರು ಮಾಡಿದರೆ ಏನಂತೆ. ಜನಸೇವೆ ಮಾಡುವುದನ್ನು ನಾನು ಬೇಡ ಎಂದು ಹೇಳಲು ಆಗುತ್ತದೆಯೇ?” ಎಂದರು.

ಉಪಚುನಾವಣೆ ಅಭ್ಯರ್ಥಿಗಳನ್ನು ಯಾವಾಗ ಘೋಷಣೆ ಮಾಡುತ್ತೀರಾ ಎಂದು ಕೇಳಿದಾಗ ” ಮೊದಲು ಚುನಾವಣಾ ದಿನಾಂಕ ಘೋಷಣೆಯಾಗಲಿ ಅವರೇ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತಾರೆ” ಎಂದರು.

ಡಿಕೆ ಶಿವಕುಮಾರ್ ಅವರೇ ನನ್ನನ್ನು ಜೈಲಿಗೆ ಹಾಕಿಸಿದ್ದು ಎನ್ನುವ ವಕೀಲ ದೇವರಾಜೇಗೌಡ ಅವರ ಆರೋಪದ ಬಗ್ಗೆ ಕೇಳಿದಾಗ ” ನನ್ನನ್ನು ನೆನೆಸಿಕೊಳ್ಳುತ್ತಿರಲಿ. ಬಹಳ ಸಂತೋಷ” ಎಂದು ಹೇಳಿದರು.

*ಇಲಾಖಾವಾರು ಅರ್ಜಿಗಳ ವಿಂಗಡಣೆ *

ನಿವೇಶನ ಹಂಚಲು ಗಡುವು ಏನಾದರೂ ಇದೆಯೇಎಂದು ಕೇಳಿದಾಗ “ಮೊದಲು ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು. ಅರ್ಹರನ್ನು ಗುರುತಿಸಲಾಗುವುದು. ನಂತರ ನಾನೇ ಖುದ್ದಾಗಿ ಬಂದು ಸರ್ಕಾರಿ ಜಮೀನು, ಖಾಸಗಿ ಜಮೀನು ಪರಿಶೀಲನೆ ನಡೆಸಿ ಹಂಚಿಕೆ ಮಾಡಲಾಗುವುದು. ಇಲಾಖಾವಾರು ಅರ್ಜಿಗಳನ್ನು ವಿಂಗಡಣೆ ಮಾಡಿ ಆಯಾಯ ಇಲಾಖೆಯ ಸಚಿವರಿಂದ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.

ಚನ್ನಪಟ್ಟಣವನ್ನು ಬದಲಾವಣೆ ಮಾಡಬೇಕು. ಮುನಿಸಿಪಾಲಿಟಿ, ತಾಲ್ಲೂಕು ಕಚೇರಿ, ಆಸ್ಪತ್ರೆ ಸೇರಿದಂತೆ ಎಲ್ಲವನ್ನು ಬದಲಾವಣೆ ಮಾಡಬೇಕು. ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲ, ಬಡವರಿಗೆ, ಬೀಡಿ ಕಾರ್ಮಿಕರಿಗೆ ಮನೆಯಿಲ್ಲ, ಈ ಬದಲಾವಣೆಗಳು ಏಕೆ ಆಗಲಿಲ್ಲವೋ ಗೊತ್ತಿಲ್ಲ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವೀಕೃತಿ ಪತ್ರ ಪಡೆದುಕೊಳ್ಳುವ ತಾಳ್ಮೆಯಿತ್ತು. ಚನ್ನಪಟ್ಟಣ ನಗರದ ಮಹಿಳೆಯರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ದಾವಂತದಲ್ಲಿ ಇದ್ದಾರೆ. ಅಂದರೆ ಜನರ ಸಮಸ್ಯೆಗಳನ್ನು ಸರಿಯಾಗಿ ಆಲಿಸಿಲ್ಲ ಎಂದರ್ಥ. ಇದಕ್ಕೆ ನಾನು ಉತ್ತರ ಕೊಡಬೇಕಾಗಿಲ್ಲ, ಮತದಾರರು, ಸ್ಥಳೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು.

ಜನಸೇವೆ ಮಾಡಲು ಅವಕಾಶ
ಜನರ ಸೇವೆ ಮಾಡಲು ನನಗೆ ಅವಕಾಶ. ನಾನು ಅಧಿಕಾರದಲ್ಲಿದ್ದು ಈ ಕಾರ್ಯಕ್ರಮದ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಾರ್ಯಕ್ರಮ. ಈ ಹಿಂದಿನ ಸರ್ಕಾರ ವೃದ್ಧಾಪ್ಯ ವೇತನ ನೀಡಲು 500 ರೂ ತೆಗೆದುಕೊಳ್ಳುತ್ತಿತ್ತು. ನಾನು ಕನಕಪುರದಲ್ಲಿ 13 ಸಾವಿರ ಜನರಿಗೆ ಪಿಂಚಣಿ ಬರುವಂತೆ ಮಾಡಿದೆ. ಪ್ರತಿ ವಾರ್ಡ್ ವಾರು ಸಭೆ ನಡೆಸಿ ಸುಮಾರು 3 ತಿಂಗಳ ಕಾಲ ನೀವೇಶನಗಳನ್ನು ಹಂಚಿದ್ದೇನೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button