LatestPolitics

*ನೂತನ ಸಂಸತ್ ಭವನದ ಮುಂದೆ ಬೆಳವಡಿ ಮಲ್ಲಮ್ಮ ಮೂರ್ತಿ ಸ್ಥಾಪನೆಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ), ಬೆಳವಡಿ ಇವರ ಕಾರ್ಯದರ್ಶಿಗಳು ಹಾಗೂ ಸದಸ್ಯರೊಂದಿಗೆ ಜೊತೆಗೂಡಿ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ, ನೂತನ ಸಂಸದ ಭವನ ಆವರಣದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮ ಕುದುರೆ ಸವಾರಿ ಮೂರ್ತಿ ಸ್ಥಾಪನೆಗಾಗಿ ಮನವಿ ಸಲ್ಲಿಸಿದರು.

ವೀರ ರಾಣಿ ಬೆಳವಡಿ ಮಲ್ಲಮ್ಮ ಒಬ್ಬ ಧೀರ ಮಹಿಳೆ, 16ನೇ ಶತಮಾನದಲ್ಲಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿದ ಸೈನ್ಯವನ್ನು ಅವರು ಸ್ಥಾಪಿಸಿದ್ದರು. ಅವರು ಹೊಂದಿದ ಸಾಮ್ರಾಜ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಎರಡು ದಿನಗಳ ಕಾಲ ಉತ್ಸವವನ್ನು ಆಚರಿಸುತ್ತದೆ ಎಂದು ಸಂಕ್ಷಿಪ್ತವಾಗಿ ಕೇಂದ್ರ ಸಂಸದೀಯ ಸಚಿವರಿಗೆ ಸಂಸದ ಜಗದೀಶ್ ಶೆಟ್ಟರ್ ಅವರು ತಿಳಿಸುತ್ತಾ ಅವರ ಸಾಧನೆಯ ಇನ್ನೂ ಹೆಚ್ಚಿನ ಮಾಹಿತಿಯನ್ನು ಒಳಗೊಂಡ ಒಂದು ಕಿರು ಪುಸ್ತಕವನ್ನು ಹಾಗೂ 7 ನಿಮಿಷದ ಸಾಕ್ಷ್ಯ ಚಿತ್ರವನ್ನು ಸಾದರಪಡಿಸಿದರು.

ವೀರರಾಣಿ ಬೆಳವಡಿ ಮಲ್ಲಮ್ಮನ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡು, ಅವರ ಗೌರವಾರ್ಥ ಮುಂಬರುವ ದಿನಗಳಲ್ಲಿ ನವದೆಹಲಿಯ “ನೂತನ ಸಂಸತ್ ಭವನ ಆವರಣದಲ್ಲಿ” ಅವರದ್ದೊಂದು ಕುದುರೆ ಸವಾರಿ ಮೂರ್ತಿ ಸ್ಥಾಪನೆ ಮಾಡುವಂತೆ ಕೋರಿದರು.

ವಿಷಯವನ್ನು ಆಲಿಸಿದ ಕೇಂದ್ರ ಸಚಿವರು ಪ್ರಸ್ತಾಪಿತ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ. 

ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ನಿಯೋಗದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ) ಬೆಳವಡಿ ಕಾರ್ಯದರ್ಶಿ ಸವಿತಾ ಪಾಟೀಲ್, ಉಪಾಧ್ಯಕ್ಷರು  ನೀಲವ್ವ ಕರಿಕಟ್ಟಿ, ಸದಸ್ಯರಾದ ಪಾರ್ವತಿ ಕರಿಕಟ್ಟಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ, ಪ್ರಕಾಶ್ ಐಹೊಳೆ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button