![](https://pragativahini.com/wp-content/uploads/2025/02/gim-.jpg)
ಜಾಗತಿಕ ಹೂಡಿಕೆದಾರರ ಸಮಾವೇಶದ ಚರ್ಚಾಗೋಷ್ಠಿ
ಪ್ರಗತಿವಾಹಿನಿ ಸುದ್ದಿ: ನಮ್ಮ ರಾಜಧಾನಿ ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈಗ ಇಲ್ಲಿ ತಲೆ ಎತ್ತುತ್ತಿರುವ ಕ್ವಿನ್ ಸಿಟಿ ವಿಶ್ವದರ್ಜೆಯ ಮಟ್ಟದ್ದಾಗಿದ್ದು, ಇಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗುವುದಲ್ಲದೇ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಇನ್ವೆಸ್ಟ್ ಕರ್ನಾಟಕ) ಎರಡನೇ ದಿನದಲ್ಲಿ “ಕ್ವಿನ್ ಸಿಟಿ ಹಾಗೂ ಆರೋಗ್ಯ ರಕ್ಷಣೆ ಕ್ಷೇತ್ರದ” ಚರ್ಚಾಗೋಷ್ಠಿಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿನ ಸಮೀಪದಲ್ಲಿ 5,800 ಎಕರೆಗಳಲ್ಲಿ ಮೈದಳೆಯುತ್ತಿರುವ ಕ್ವಿನ್ ಸಿಟಿ, ವೈದ್ಯಕೀಯ ಕ್ಷೇತ್ರದ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಔಷಧಗಳು, ರೋಗನಿರ್ಣಯಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೂಡಿಕೆಯನ್ನು ಆಕರ್ಷಿಸಲಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.
ಶೇಕಡ 22 ವಾರ್ಷಿಕ ಬೆಳವಣಿಗೆ
ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ಆರೋಗ್ಯ ರಕ್ಷಣೆ ಬೇಡಿಕೆಗಳಿಂದ ಕರ್ನಾಟಕದ ಆರೋಗ್ಯ ಮಾರುಕಟ್ಟೆಯು ಶೇಕಡ 22 ವಾರ್ಷಿಕ ಬೆಳವಣಿಗೆಯ ದರದಲ್ಲಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.
ಕ್ವಿನ್ ಸಿಟಿಯು ವೈದ್ಯಕೀಯ ಪ್ರವಾಸೋದ್ಯಮಕ್ಕೆ ರಹದಾರಿಯಾಗಲಿದೆ. ನಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳ ಹಲವಾರು ವಿದೇಶಿಯರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಕ್ವಿನ್ ಸಿಟಿ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.
ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಕೆಲವು ಮಹತ್ವದ ಯೋಜನೆಗಳು ಜಾರಿಗೆ ಬರುತ್ತವೆ. ನಮ್ಮ ಸರ್ಕಾರದ ಅನುಕೂಲಕರ ನೀತಿಗಳಿಂದ ಮತ್ತು ಪ್ರೋತ್ಸಾಹಕಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಬಹುದಾಗಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಕ್ವಿನ್ ಸಿಟಿಯಲ್ಲಿ ಇದೆ ಅನನ್ಯ ಅವಕಾಶ
ಕ್ವಿನ್ ಸಿಟಿ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಅಭಿವೃದ್ಧಿಪಡಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿ ಇದು ತಲೆ ಎತ್ತಲಿದೆ. ಇಲ್ಲಿ ಬಯೋಟೆಕ್/ಫಾರ್ಮಾ, ಪ್ರಮಖ ಆಸ್ಪತ್ರೆಗಳು, ಉದ್ದಿಮೆಗಳು ಸ್ಥಾಪನೆಯಾಗುವುದರಿಂದ ಆರ್ಥಿಕತೆ ಇನ್ನಷ್ಟು ಚೇತರಿಕೆಯಾಗುತ್ತದೆ. ಜನರಿಗೆ ವಿಶೇಷ ಸೌಲಭ್ಯಗಳು ದೊರೆಯುತ್ತವೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ವಿವರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಎನ್.ಎಸ್.ಬೋಸರಾಜು, ಹಿರಿಯ ಅಧಿಕಾರಿಗಳಾದ ಎಸ್.ಸೆಲ್ವಕುಮಾರ್, ಏಕ್ರೂಪ್ ಕೌರ್, ಗುಂಜನ್ ಕೃಷ್ಣ ಹಾಗೂ ಉದ್ಯಮದ ಪ್ರಮುಖರು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ