*ಸಕ್ಕರೆ ಕಾರ್ಖಾನೆಗಳಲ್ಲಿ ಅವ್ಯವಹಾರ ಆಗಿರೋದು ಸಾಬೀತಾಗಿದೆ: ಸಚಿವ ಶಿವಾನಂದ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ 7-8 ನೂರು ಕೋಟಿ ರೂ ಕಬ್ಬಿನ ಬಿಲ್ ಬಾಕಿ ಇರಬಹುದು, 18 ಸಾವಿರ ಕೋಟಿ ಹಣ ಕಬ್ಬಿನ ಬಾಕಿ ಬಿಲ್ ಸಂದಾಯ ಮಾಡಲಾಗಿದೆ. ಆಡಳಿತ ಮಂಡಳಿಯವರು ಒಳ್ಳೆಯ ರೀತಿಯಿಂದ ನಿರ್ವಹಣೆ ಮಾಡಿದ್ರೆ ಕಾರ್ಖಾನೆಗಳು ಲಾಭದಲ್ಲಿ ನಡೆಯುತ್ತವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಷ್ಟದಲ್ಲಿರುವ ಸಕ್ಕರೆ ಸಹಕಾರಿ ಕಾರ್ಖಾನೆಗಳನ್ನ ಗುತ್ತಿಗೆ ನಿರ್ವಹಣೆ ಮಾಡುತ್ತಿದ್ದೇವೆ. ಈಗಾಗಲೇ 13 ಸಕ್ಕರೆ ಕಾರ್ಖಾನೆಗಳನ್ನು ಗುತ್ತಿಗೆ ಪಡೆದು ಪುನಶ್ಚೇತನ ಮಾಡಲಾಗಿದೆ. ನಾನು ಬಂದ್ಮೇಲೆ ರನ್ನ ಶುಗರ್ ಸಕ್ಕರೆ ಕಾರ್ಖಾನೆ ಕೊಟ್ಟಿದ್ದೇನೆ.
ರಾಜ್ಯದಲ್ಲಿನ ಕೆಲ ಕಾರ್ಖಾನೆಗಳಲ್ಲಿ ಅವ್ಯವಹಾರ ಆಗಿರೋದು ಮೇಲ್ನೋಟಕ್ಕೆ ಸಾಬೀತು ಆಗಿದೆ. ಅಕ್ರಮ ಎಸಗಿದ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವ ಕೆಲಸವಾಗುತ್ತಿದೆ. ಹೊಸ ಹೊಸ ಆವಿಷ್ಕಾರ ಕುರಿತು ಶುಗರ್ ಕಮಿಷನರ್ ಆಫೀಸ್ ನಲ್ಲಿ ಟೆಕ್ನಿಕಲ್ ಸೆಮಿನಾರ್ ಕಾರ್ಯಕ್ರಮ ಇದೆ. ಕರ್ನಾಟಕದಲ್ಲಿ 80 ಕಾರ್ಖಾನೆಗಳ ಪೈಕಿ ಕೆಲ ಮುಚ್ಚಿವೆ. ಅಂತಹ ಸಕ್ಕರೆ ಕಾರ್ಖಾನೆಗಳಿಗೆ ಹೊಸ್ ಟೆಕ್ನಾಲಜಿಯನ್ನ ಸೇರಿಸಬೇಕಿದೆ.
ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಅತೀ ದೊಡ್ಡ ರಾಜ್ಯವಾಗಿದೆ. ಬರಗಾಲ ಇದ್ದಿದ್ದರಿಂದ ಹಿಂದಿನ ವರ್ಷಕ್ಕಿಂತ ಈ ವರ್ಷ ಕಬ್ಬಿನ ಬೆಳೆ ಕಡಿಮೆ ಆಗಿದೆ. 6ಲಕ್ಷ ಮ್ಯಾಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಮಾಡುವ ಗುರಿ ಇಟ್ಟುಕ್ಕೊಂಡಿದ್ದೇವೆ ಎಂದರು.
ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 72 ಕೋಟಿ ಹಗರಣ ವಿಚಾರವಾಗಿ ಮಾತನಾಡಿದ ಅವರು, ತನಿಖೆಯಾಗಿ ಅವರ ಮೇಲೆ ಚಾರ್ಜ್ ಶೀಟ್ ಹಾಕಿದರೆ ಕೋರ್ಟ್ ನಲ್ಲಿ ಮಧ್ಯಂತರ ಆದೇಶ ಬರುತ್ತೆ. ನಾವು ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.