
ಪ್ರಗತಿವಾಹಿನಿ ಸುದ್ದಿ: ತಂದೆಯೇ ಮಗಳನ್ನು ಹತ್ಯೆ ಮಾಡಿ ನದಿಗೆ ಎಸೆದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಲಿಂಗಸಗೂರು ತಾಲೂಕಿನ ಹಂಚಿನಾಳ ಗ್ರಾಮದ ಲಕ್ಕಪ್ಪ ಮಗಳನ್ನೇ ಕೊಂದ ತಂದೆ. ರೇಣುಕಾ (18) ಕೊಲೆಯಾಗಿರುವ ಮಗಳು. ಈ ಘಟನೆಯ ಸತ್ಯ ತಡವಾಗಿ ಬೆಳಕಿಗೆ ಬಂದಿದೆ.
ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಆರೋಪಿ ಸತ್ಯ ವಿಚಾರ ಬಾಯ್ಬಿಟ್ಟಿದ್ದು, ಈ ವೇಳೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. 2024 ಸೆಪ್ಟೆಂಬರ್ 29ರಂದು ತಂದೆ ಲಕ್ಕಪ್ಪ ಮಗಳು ರೇಣುಕಾಳನ್ನು ಹತ್ಯೆ ಮಾಡಿ ಶವವನ್ನು ಮೂಟೆ ಕಟ್ಟಿ ಕೃಷ್ಣಾನದಿಗೆ ಎಸೆದಿದ್ದಾನೆ.
ಗ್ರಾಮದ ಅನ್ಯಜಾತಿಯ ಯುವಕ ಹನುಮಂತನನ್ನು ರೇಣುಕಾ ಪ್ರೀತಿಸುತ್ತಿದ್ದಳು. ಮದುವೆಗೆ ಕುಟುಂಬದವರು ವಿರೋಧಿಸಿದ್ದರು. ಇಬ್ಬರೂ ಗ್ರಾಮ ಬಿಟ್ಟು ಓಡಿ ಹೋಗಿದ್ದರು. ಆಗಿನ್ನೂ ರೇಣುಕಾಗೆ 17 ವರ್ಷ. ಮಗಳು ಅಪ್ರಾಪ್ತಳಾಗಿದ್ದರಿಂದ ತಂದೆ ಲಕ್ಕಪ್ಪ ಪೊಲೀಸರುಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹನುಮಂತ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಹನುಮಂತನನ್ನು ಬಂಧಿಸಿ ಜೈಲುಗೆ ಕಳುಹಿಸಿದ್ದರು.
ಆದರೆ ರೇಣುಕಾ ಮಾತ್ರ ಹನುಮಂತನನ್ನೇ ವಿವಾಹವಾಗುವುದಾಗಿ ಹಟ ಹಿಡಿದಿದ್ದಳು. ಕೆಲ ದಿನಗಳ ಬಳಿಕ ಹನುಮಂತ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಆತನ ಜೊತೆ ರೇಣುಕಾ ಮತ್ತೆ ಓಡಾಟ ನಡೆಸಿದ್ದಳು. ಎಷ್ಟೇ ಬುದ್ಧಿ ಹೇಳಿದರೂ ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಳು. ಇದರಿಂದ ಕೋಪಗೊಂಡ ಲಕ್ಕಪ್ಪ ಮಗಳನ್ನು ಹತ್ಯೆ ಮಾಡಿ ಶವನ್ನು ಮೂಟೆ ಕಟ್ಟಿ ನದಿಗೆ ಎಸೆದಿದ್ದ. ಇದೀಗ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.