*ಕಾಂಗ್ರೆಸ್ ಶಾಲು ಹಾಕ್ಕೊಂಡು ಬಿಜೆಪಿಗರು ಸಮಾವೇಶಕ್ಕೆ ಬಂದಿದ್ರು: ಗೃಹ ಸಚಿವ ಪರಮೇಶ್ವರ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಲನ್ನು ಹಾಕಿಕೊಂಡು ಬಿಜೆಪಿ ಕಾರ್ಯಕರ್ತೆಯರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಲು ಆಗಮಿಸಿದ್ದರು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಆರೋಪಿಸಿದರು.
ನಿನ್ನೆಯ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡುವಾಗ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಪ್ರದರ್ಶಿಸಿದ ಪ್ರಸಂಗ ನಡೆದಿತ್ತು. ಈ ಕುರಿತು ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿ, ವೇದಿಕೆ ಮೇಲೆ ಸಿಎಂ ಅವರು ಆ ಮಟ್ಟಿಗೆ ಅಪ್ಪೆಟ್ ಯಾಕೆ ಆದರು ಅಂತಾ ಪೂರ್ಣ ಮಾಹಿತಿ ನನಗಿಲ್ಲ ಎಂದರು.
ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ್ದು ತಪ್ಪು. ಸುಮಾರು ಐದರಿಂದ ಆರು ಜನ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ನಮ್ಮ ಪಕ್ಷದ ಶಾಲುಗಳನ್ನು ಹಾಕಿಕೊಂಡು ಬಂದಿದ್ದರು. ಸಿಎಂ ಮಾತನಾಡುವಾಗ ಮಾತ್ರ ಅಡ್ಡಿಪಡಿಸಿದರು. ಸಿದ್ದರಾಮಯ್ಯ ಅವರು ಮಾತನಾಡುವ ಸಂದರ್ಭದಲ್ಲಿ ಅವರು ಗದ್ದಲ ಉಂಟು ಮಾಡಿದ್ದರು ಎಂದು ತಿಳಿಸಿದರು.
ಇನ್ನು ಸಮಾವೇಶದಲ್ಲಿ ಏನು ಭದ್ರತೆ ಲೋಪ ಆಗಿದೆ? ಇಲಾಖೆಯಿಂದ ಆಗಿದೆಯಾ ಎಂಬುವುದರ ಬಗ್ಗೆ ಮಾಹಿತಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರಿಗೆ ಸೂಚಿಸಿದ್ದಾಗಿ ಹೇಳಿದರು.