
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಶ್ಮೀರದ ಪಹಲ್ಗಾಮ್ ದಲ್ಲಿ ನಡೆದ ಉಗ್ರರ ಪೈಶಾಚಿಕ ದಾಳಿ ವಿರುದ್ಧ ಸಿಡಿದೆದ್ದ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡುವ ಮೂಲಕ ಉಗ್ರರ ಹೆಡೆಮುರಿ ಕಟ್ಟಿದ್ದಕ್ಕೆ ಬೆಳಗಾವಿ ಜಿಲ್ಲೆಯಾದ್ಯಂತ ಸಂಭ್ರಮಾಚರಣೆ ನಡೆಸಲಾಗಿದೆ.
ಮಾಜಿ ಸೈನಿಕರಿಂದ ಸಂಭ್ರಮಾಚರಣೆ
ಪಾಪಿ ಪಾಕಿಸ್ತಾನದ ಮೇಲೆ ಭಾರತ ಸೇಡು ತೀರಿಸಿಕೊಳ್ಳಲು ಭಾರತ ಮಧ್ಯರಾತ್ರಿಯಿಂದಲೆ ದಾಳಿ ಮಾಡುತ್ತಿದ್ದು, ಬೆಳಗಾವಿಯಲ್ಲಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ನಾಗರಿಕರು ಸೆಲೆಬ್ರೇಷನ್ ಮಾಡಿದ್ದಾರೆ.
ಭಾರತದ ಧ್ವಜ ಹಿಡಿದು, ಸಿಹಿ ಹಂಚಿ ಮಾಜಿ ಸೈನಿಕರು ಸಂಭ್ರಮಿಸಿದರು. ಭಾರತ ಹಾಗೂ ಭಾರತೀಯ ಸೇನೆ ಪರ ಘೋಷಣೆ ಕೂಗಿದರು. ಇನ್ನೊಂದು ಕಡೆ ಬೆಳಗಾವಿಯಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿ, ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಭಾರತೀಯ ಸೇನೆ, ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
ಬೆಳಗಾವಿ ಬೋಗಾರವೇಸ್ ವೃತ್ತದಲ್ಲಿ ಇರುವ ಛತ್ರಪತಿ ಸಂವಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿದ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಬೋಗಾರ್ವೇಸ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಭಾರತ್ ಮಾತಾಕೀ ಜೈ ಎಂದು ಜಯ ಘೋಷ ಕೂಗಿದರು.
ಪಾಕಿಸ್ತಾನ ಸಂಪೂರ್ಣವಾಗಿ ನಿರ್ನಾಮ ಆಗಲಿ
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ.
ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ ಮುರ್ದಾಬಾದ್ ಎಂಬ ಘೋಷಣೆ ಕೂಗಿ, ಕೈಯಲ್ಲಿ ತಿರಂಗಾ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಮಾಜಿ ಸೈನಿಕರು ವಿಜಯೋತ್ಸವ ಆಚರಿಸಿದರು. ಪಾಕಿಸ್ತಾನ ಸಂಪೂರ್ಣವಾಗಿ ನಿರ್ನಾಮವಾಗಲಿ ಎಂದು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸಿದರು.
ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಜನತೆ
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾರತೀಯ ಯೋಧರ ಕಾರ್ಯಾಚರಣೆ ಯಶಸ್ವಿಗೆ ವಿಘ್ನೇಶ್ವರನಿಗೆ ವಿಶೇಷ ಮಂಗಳಾರತಿ ಮಾಡಿ ಬೆಳಗಾವಿ ಜನತೆ ಶುಭ ಹಾರೈಸಿದರು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.