*ರಾಜ್ಯದಲ್ಲಿ ಬರ ಘೋಷಿಸಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು: ಎನ್. ರವಿಕುಮಾರ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಲ್ಲಿ ತಕ್ಷಣ ಬರ ಘೋಷಿಸಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಮೂರ್ನಾಲ್ಕು ತಾಲೂಕುಗಳಲ್ಲಿ ಬರ ವೀಕ್ಷಣೆ ಮಾಡಿದ್ದೇವೆ. ರೈತರ ಪರಿಸ್ಥಿತಿ ಆಶಾದಾಯಕವಾಗಿಲ್ಲ . ಯರಗಟ್ಟಿ ಸೊಪಡ್ಲದಲ್ಲಿ ಹೆಸರು, ಹತ್ತಿ, ಮೆಕ್ಕೆಜೋಳ ಬೆಳೆ ಪರಿಶೀಲನೆ ಮಾಡಿದ್ದೇವೆ. ಹೆಸರು ಬೆಳೆಯಲ್ಲಿ ಕಾಳೇ ಇಲ್ಲ.8ರಿಂದ 12 ಕ್ವಿಂಟಲ್ ಬೆಳೆಯುತ್ತಿದ್ದ ರೈತರಿಗೆ ಈ ಬಾರಿ 12 ಕೆಜಿಯೂ ಸಿಗುತ್ತಿಲ್ಲ.ರಾಮದುರ್ಗದಲ್ಲಿ ಕುರಿಗಳಿಗೆ ಕುಡಿಯಲು ನೀರಿಲ್ಲ. ಚಂದರಗಿ ಕೆರೆ ತುಂಬಿಸಲು ಹಣ ಖರ್ಚಾದರೂ ಕೆರೆಗೆ ನೀರು ಬಂದಿಲ್ಲ ಎಂದು ಆರೋಪಿಸಿದರು.
ಸಾಲಾಪುರ ಏತ ನೀರಾವರಿ ಯೋಜನೆ ಇನ್ನೂ ಕಾರ್ಯಾರಂಭವಾಗಿಲ್ಲ. ಯೋಜನೆಯಿಂದ 60ಕ್ಕೂ ಹೆಚ್ಚು ಹಳ್ಳಿಗಳಿಗೆ ಅನಾನುಕೂಲವಾಗಿದೆ. ಸಿದ್ದರಾಮಯ್ಯ ಅವಧಿಯಲ್ಲೇ ಉದ್ಘಾಟನೆಯಾದ ಯೋಜನೆ ಜನರಿಗೆ ಇನ್ನೂ ಉಪಯೋಗವಾಗಿಲ್ಲ. ಕಟಕೋಳದಲ್ಲಿ ಶೇಂಗಾ ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರ ವಿಷ ಕೊಟ್ಟರೆ ಕುಡಿದು ಸಾಯುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸರ್ಕಾರ ಬರ ಘೋಷಣೆ ಮಾಡುತ್ತಿಲ್ಲ. ತಕ್ಷಣ ಬರ ಘೋಷಿಸಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು. ಲಾವಣಿ ಪಡೆದ ರೈತರ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಬೇಕು ಎಂದರು.
19 ಸಚಿವರ ಪೈಕಿ ಶೇ.80ರಷ್ಟು ಮಂದಿ ಪೇಮೆಂಟ್ ಕೋಟಾದಡಿ ಆಯ್ಕೆ: ಆರೋಪ
ರೈತರ ಹೊಲ-ಮನೆಗಳಿಗೆ ಹೋಗಬೇಕಿದ್ದ ಸಿಎಂ ಅಸಮಾಧಾನಿತ ಶಾಸಕರ ಮನೆಗೆ ಹೋಗುತ್ತಿದ್ದಾರೆ. ಮೊದಲು ರೈತರ ಸಮಸ್ಯೆ ಆಲಿಸಲು ಸಿಎಂ ಹೊಲಗಳಿಗೆ ತೆರಳಬೇಕು ಆಗ್ರಹಿಸಿದರು.
19 ಸಚಿವರ ಪೈಕಿ ಶೇ.80ರಷ್ಟು ಮಂದಿ ಪೇಮೆಂಟ್ ಕೋಟಾದಡಿ ಆಯ್ಕೆಯಾಗಿದ್ದಾರೆ . ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ಸಚಿವ ಸಂಪುಟದಲ್ಲಿ ದಲ್ಲಾಳಿ ವ್ಯಾಪಾರ ನಡೆಯುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ ಎಂದರು.



