

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲ್ಲೂಕಿನ ಭೀಮಗಡ ಪ್ರಕೃತಿ ಶಿಬಿರಕ್ಕೆ ಶನಿವಾರ ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ವಿಠ್ಠಲ ಹಲಗೇಕರ ಅವರು ಮಾರ್ಗಮಧ್ಯದ ಶಿರೋಲಿ ಗ್ರಾಮದ ಹೊರವಲಯದ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯಿಂದ ಈಚೆಗೆ ನಿರ್ಮಾಣಗೊಂಡ ಭೀಮಗಡ ವನ್ಯಧಾಮದ ಸ್ವಾಗತ ಕಮಾನನ್ನು ಲೋಕಾರ್ಪಣೆಗೊಳಿಸಿದರು.
ಎಸಿಎಫ್ ಸುನೀತಾ ನಿಂಬರಗಿ ಸ್ವಾಗತ ದ್ವಾರ ನಿಮರ್ಾಣದ ಉದ್ದೇಶ ಮತ್ತು ಭೀಮಗಡ ವನ್ಯಧಾಮದ ಪ್ರಾಮುಖ್ಯತೆಯನ್ನು ಸಚಿವರು ಮತ್ತು ಶಾಸಕರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್, ಬೆಳಗಾವಿ ಎಸಿಎಫ್ ನಾಗರಾಜ ಬಾಳೆಹೊಸೂರ, ಆರ್.ಎಫ್.ಒಗಳಾದ ಶ್ರೀಕಾಂತ ಪಾಟೀಲ, ಮೃತ್ಯುಂಜಯ ಗಣಾಚಾರಿ, ವೈ.ಪಿ ತೇಜ, ಶಿವಕುಮಾರ, ಸೈಯದ ನದಾಫ, ಪ್ರಶಾಂತ ಜೈನ, ಪಿಡಿಒ ಪ್ರಭಾಕರ ಭಟ್, ಡಿ.ಆರ್.ಎಫ್.ಒ ಎಂ.ಜಿ ನಂದೆಪ್ಪಗೋಳ, ಎಂ.ಬಿ ಮುರಗೋಡ, ಅರಣ್ಯ ರಕ್ಷಕ ಮಂಜುನಾಥ ಕಟ್ಟಿ, ಮಹಾವೀರ ನಂದಗಾವಿ, ಕ್ಲಿಫರ್ಡ್ ರುಜಾರಿಯೋ, ಸುನೀತಾ ನಿಂಬರಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಇದ್ದರು.
ಸಚಿವರಿಗೆ ಗೋಚರಿಸಿದ ಕಾಡುಕೋಣಗಳು
ಸ್ವಾಗತ ದ್ವಾರ ಉದ್ಘಾಟಿಸಿ ಮುಂದೆ ಸಾಗಿದ ಸಚಿವರು ಮತ್ತು ಶಾಸಕರ ವಾಹನದ ಮುಂದಿನಿಂದ ಎರಡು ದೊಡ್ಡ ಗಾತ್ರದ ಕಾಡುಕೋಣಗಳು ರಸ್ತೆ ದಾಟಿ ಅರಣ್ಯದೊಳಗೆ ಹೋಗಿದ್ದು ವಿಶೇಷವಾಗಿತ್ತು. ಸಚಿವರು ಮತ್ತು ಶಾಸಕರು ವಾಹನಗಳನ್ನು ನಿಲ್ಲಿಸಿ ತಮ್ಮೆದುರಲ್ಲೇ ನಿಧಾನವಾಗಿ ಗಾಂಭೀರ್ಯ ನಡೆಯ ಮೂಲಕ ರಸ್ತೆ ದಾಟಿ ಅರಣ್ಯದೊಳಗೆ ತೆರಳಿದ ಕಾಡುಕೋಣಗಳನ್ನು ಕುತೂಹಲದಿಂದ ವೀಕ್ಷಿಸಿದರು.
ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಸಚಿವರನ್ನು ಸ್ವಾಗತಿಸಿದ ಕಲಾತಂಡಗಳು
ಖಾನಾಪುರ: ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭೀಮಗಡ ಪ್ರಕೃತಿ ಶಿಬಿರಕ್ಕೆ ಆಗಮಿಸಿದ ಸಚಿವರಾದ ಖಂಡ್ರೆ, ಜಾರಕಿಹೊಳಿ, ಶಾಸಕ ಹಲಗೇಕರ ಸೇರಿದಂತೆ ಗಣ್ಯರು ಮತ್ತು ಆಹ್ವಾನಿತರನ್ನು ಸ್ಥಳೀಯ ಗೌಳಿ ಜನಾಂಗದ ಕಲಾವಿದರು ತಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆ ಮತ್ತು ವಿಶಿಷ್ಟವಾದ ನೃತ್ಯದ ಮೂಲಕ ಸ್ವಾಗತಿಸಿದರು. ಕಲಾತಂಡಗಳು ಮುಖ್ಯ ರಸ್ತೆಯಿಂದ ಗಣ್ಯರನ್ನು ಬರಮಾಡಿಕೊಂಡು ಮಂಗಳವಾದ್ಯಗಳೊಂದಿಗೆ ಕಾರ್ಯಕ್ರಮದ ಮುಖ್ಯ ವೇದಿಕೆಯವರೆಗೆ ಕರೆತಂದದ್ದು ವಿಶೇಷವಾಗಿತ್ತು.