
ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಬಾಲಕನನ್ನು ಮಲತಂದೆಯೇ ಹೊಡೆದು ಕೊಂದಿರುವ ಪ್ರಕರಣ ಸಂಬಮ್ಧ, ಮಲತಂದೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ವರ್ ಮಾಂಜಿ, ರಾಕೇಶ್ ಮಾಂಜಿ, ಶ್ರೀನಾಥ್ ಮಾಂಜಿ, ಮಹೇಶ್ ಬಂಧಿತ ಆರೋಪಿಗಳು. ಬಿಹಾರ ಮೂಲದ ರಂಗೀಲಾ ಎಂಬ ಮಹಿಳೆ ಎರಡನೇ ಮದುವೆಯಾಗಿ ಬೈಲಹೊಂಗಲದ ಬಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನೊಂದಿಗೆ ಮೊದಲ ಪತಿಯ ಮಗ ಮೂರು ವರ್ಷದ ಕಾರ್ತಿಕ್ ನನ್ನು ಕರೆತಂದಿದ್ದಳು.
ಇದೇ ವಿಚಾರವಾಗಿ ರಂಗೀಲಾ ಹಾಗೂ ಎರಡನೇ ಪತಿ ಮಹೇಶ್ವರ್ ಗೂ ಆಗಾಗ ಜಗಳವಾಗುತ್ತಿತ್ತು. ನಿನ್ನೆ ಕಂಠಪೂರ್ತಿ ಕುಡಿದು ಸ್ನೇಹಿತರೊಂದಿಗೆ ಮನೆಗೆ ಬಂದಿದ್ದ ಮಹೇಶ್ವರ್ ನಿನ್ನ ಮಗನನ್ನು ಯಾಕೆ ಕರೆದಿಕೊಂಡು ಬಂದಿದ್ದೀಯಾ ಎಂದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತನಿಗೆ ಆತನ ಸ್ನೇಹಿತರೂ ಸಾಥ್ ನೀಡಿದ್ದಾರೆ. ಬೇರೆ ದಾರಿ ಕಾಣದೆ ಮಹಿಳೆ ಮಗನನ್ನು ಅಲ್ಲೇ ಬಿಟ್ಟು ಸ್ಥಳದಿಂದ ತಪ್ಪಿಸಿಕೊಂಡು ಓಡಿದ್ದಾಳೆ. ಈ ವೇಳೆ ಅಲ್ಲಿಯೇ ಇದ್ದ ಮಗನನ್ನು ಒಲೆಯಲ್ಲಿದ್ದ ಸೌಧೆಯಿಂದ ಸುಟ್ಟು, ಆತನಿಗೆ ಮನ ಬಂದಂತೆ ಹೊಡೆದು ಸಾಯಿಸಿದ್ದಾರೆ.
ರಂಗೀಲಾ ವಾಪಸ್ ಮನೆಗೆ ಬಂದು ನೋಡಿದಾಗ ಮಗ ರಕ್ತದ ಮಡುವಲ್ಲಿ ಬಿದ್ದು ಸಾವನ್ನಪ್ಪಿರುವುದನ್ನು ಕಂಡು ಆಘಾತಗೊಂಡಿದ್ದಾಳೆ. ತಕ್ಷಣ ಮುರಗೋಡ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.