Kannada NewsKarnataka NewsPolitics

*ಹುಬ್ಬಳ್ಳಿ, ನವಲಗುಂದದಲ್ಲಿ ಪ್ರವಾಹ ಪರಿಸ್ಥಿತಿ: ಪರಿಶೀಲಿಸಿದ ಸಚಿವ ಸಂತೋಷ್ ಲಾಡ್*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ಮತ್ತು ನವಲಗುಂದ ಸೇರಿದಂತೆ ತಾಲೂಕಿನ ಕರ್ಲವಾಡ, ಆರೇಕುರಟ್ಟಿ, ಯಮನೂರ ಗ್ರಾಮಗಳ ಹತ್ತಿರ ಬೆಣ್ಣಿಹಳ್ಳದ ಪ್ರವಾಹದಿಂದ ಅಪಾರ ಪ್ರಮಾಣದ ನೀರು ಬಂದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ಮತ್ತು ಹಾನಿಯಾದ ಪ್ರದೇಶವನ್ನು  ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್. ಲಾಡ್‌ ಹಾಗೂ ಶಾಸಕ ಎನ್. ಎಚ್. ಕೋನರಡ್ಡಿ ಅವರು ವೀಕ್ಷಣೆ ಮಾಡಿದರು.

ರಸ್ತೆ, ಸೇತುವೆ ಹಾಗೂ ಇತರ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ತ್ವರಿತವಾಗಿ ದುರಸ್ತಿ, ಮರು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸಚಿವ ಲಾಡ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರೈತರು ಈಗಾಗಲೇ ಹೆಸರು ಬೆಳೆ ಹಾಗೂ ಇತರೆ ಮುಂಗಾರು ಬೆಳೆ ಬಿತ್ತಿದ್ದಾರೆ. ಹೆಸರು ಬೆಳೆ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದು, ಧಾರಾಕಾರ ಮಳೆಯಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಿದೆ. ರೈತರ ಜಮೀನುಗಳಲ್ಲಿನ ಬದುವುಗಳು ಕೊಚ್ಚಿ ಹೋಗಿ ಹಾನಿಯಾಗಿದೆ. ಕ್ಷೇತ್ರದಲ್ಲಿ ಬೆಳೆ ಹಾನಿ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಮಾಹಿತಿ ಮತ್ತು ವರದಿ ಮೇಲೆ ಸರ್ಕಾರದ ಜೊತೆ ಚರ್ಚಿಸಿ, ಎಸ್.ಡಿ.ಆರ್.ಎಫ್ ನಿಯಾಮವಳಿಗಳನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ನವಲಗುಂದ ಭಾಗದಲ್ಲಿ 7-8 ಜಾಗಗಳಲ್ಲಿ ಪ್ರವಾಹ ನೋಡಿದ್ದೇನೆ. ನಾಲಾ ಹಾಗೂ ಹಳ್ಳ ಅಗಲೀಕರಣಕ್ಕೆ ರೂ.1600 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ರೂ. 200 ಕೋಟಿ 140 ಕಿ.ಮಿ ಹಳ್ಳ ಅಗಲೀಕರಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

Home add -Advt

ಬಹಳ ವರ್ಷಗಳಿಂದ  ನವಲಗುಂದ, ಕುಂದಗೋಳ  ಭಾಗಗಳಲ್ಲಿ ಈ ರೀತಿ ಪ್ರವಾಹ ಪರಿಸ್ಥಿತಿಯಿಂದ ತೊಂದರೆ ಆಗುತ್ತಿದೆ. ಇದಕ್ಕೆ ಸಂಪೂರ್ಣ ಪರಿಹಾರ ಕಂಡು ಹಿಡಿಯಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಇರುವಂತ ಕಾಮಗಾರಿ ಯೋಜನೆ ಬಂಡು (ಬದು) ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ 160 ಕೋಟಿಯ ಕಾಮಗಾರಿಗೆ ಡಿಪಿಆರ್ ಮಾಡಲಾಗಿದ್ದು, ಅದು ಒಂದು ಹಂತಕ್ಕೆ ಬಂದಿದೆ ಎಂದು ಹೇಳಿದರು.

ಮುಂದಿನ ವರ್ಷ 2026 ರ ಜನವರಿಯಲ್ಲಿ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಎರಡು ಕಾಮಗಾರಿಗಳು ಪ್ರಾರಂಭವಾದರೆ ಬಹುತೇಕ ಮುಂದೆ ಬರುವ ಮಳೆಗಾಲದಲ್ಲಿ ನವಲಗುಂದಕ್ಕೆ ಮಳೆಯಿಂದಾಗಿ ಪ್ರವಾಹ ಬರುವ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.

ಹಳ್ಳಗಳ ಭಾಗಗಳಲ್ಲಿರುವ ಹೊಲಗಳಿಗೆ ರೈತರು ಬಿತ್ತನೆಯನ್ನು ಮಾಡಿದ್ದಾರೆ. ಕೆಲವು ಹೊಲಗಳಿಗೆ ನೀರು ನುಗ್ಗಿದೆ. ಅದರಿಂದ ರೈತರಿಗೆ ತೊಂದರೆಯಾಗಿದೆ ಅದನ್ನು ಪರಿಗಣಿಸಿ ಮುಂದೆ ಮತ್ತೆ ಬಿತ್ತನೆ ಮಾಡುವ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಅದರಂತೆ ಮುಂದೆ ಫಸಲು ಬರದೆ ಹೋದಲ್ಲಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್ ಲಾಡ ಅವರು ತಿಳಿಸಿದರು.

ವಿವಿಧ ಗ್ರಾಮಗಳಲ್ಲಿ ಮಳೆಹಾನಿ ವೀಕ್ಷಣೆ

ನವಲಗುಂದ ವಿಧಾನಸಭಾ ಮತಕ್ಷೆತ್ರ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕಿನ  ಹೆಬಸೂರ ಸಮೀಪದ  ನಿಗರಿ ಹಳ್ಳದ ಬ್ರಿಜ್, ಸರಕಾರಿ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಗಿರುವ ಮಳೆ ಹಾನಿ, ಕೆಸರು, ಅವ್ಯವಸ್ಥೆಗಳ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಹುಬ್ಬಳ್ಳಿ ತಹಶಿಲ್ದಾರ ಜೆ.ಬಿ.ಮಜ್ಜಗಿ ಹಾಗೂ ಇತರರು ಇದ್ದರು.

ಬೆಣ್ಣಹಳ್ಳದಿಂದ ಬಾಧಿತವಾದ ಅರೆಕುರಹಟ್ಟಿ ಗ್ರಾಮದ ಮನೆಗಳನ್ನು ಹಾಗೂ ರಸ್ತೆ ವಿಕ್ಷಣೆ ಮಾಡಿದ ಸಚಿವರು ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸುವದಾಗಿ ತಿಳಿಸಿದರು. ಅಲ್ಲಿಂದ ಯಮನೂರ ಕರ್ಲವಾಡ ಮಧ್ಯದಲ್ಲಿರುವ ಬ್ರಿಜ್ ವೀಕ್ಷಣೆ ಮಾಡಿ, ರೈತರ ಬಿತ್ತನೆ ಹಾಗೂ ರೈತರ ಕೃಷಿ ಚಟುವಟಿಕೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕರ್ಲವಾಡ ಗ್ರಾಮದಲ್ಲಿ ಬೆಳೆಹಾನಿಗೆ ಪರಿಹಾರ ನೀಡುವಂತೆ ಹಾಗೂ ಬೆಣ್ಣೆ ಹಳ್ಳದ ತೊಂದರೆ ತಪ್ಪಿಸಲು ರೈತರಿಂದ ಸಚಿವರಿಗೆ ಮನವಿ ಮಾಡಿದರು.

ನಂತರ ಅವರು ನವಲಗುಂದ ಪಟ್ಟಣದ ಚರಂಡಿ ವ್ಯವಸ್ಥೆ, ನವಲಗುಂದ -ಇಬ್ರಾಹಿಂಪುರ ರಸ್ತೆಯಲ್ಲಿ ಬರುವ ಅಂಬಲಿ ಹಳ್ಳ ಮತ್ತು ದೇಸಾಯಿ ಹಳ್ಳದ ಬ್ರಿಜ್, ರಸ್ತೆ, ರೈತರ ಬದು, ಒಡ್ಡುಗಳು ಮಳೆಗೆ ಹಾನಿ ಆಗಿರುವ ಕುರಿತು ಪರಿಶೀಲಿಸಿ, ವಿವರ ಪಡೆದುಕೊಂಡರು.

ನಂತರ ನಗರದಿಂದ ಇಬ್ರಾಹಿಂಪುರ ರಸ್ತೆಯಲ್ಲಿರುವ ಎಸ್. ಎಸ್. ಭಾಗಿ ಶಾಲೆಗೆ ಭೇಟಿ ನೀಡಿ, ಅಂಬಲಿ ಹಾಗೂ ಬಾಸನೂರಿನ ಸರವಿನ ಹಳ್ಳ ಬ್ರಿಡ್ಜ್ ಕಾಮಗಾರಿಗೆ ಅನುಮೋದನೆಗೆ ಪ್ರಸ್ತಾವನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಮಂಡಕ್ಕಿ ಮಿರ್ಚಿ ಸವಿದ ಸಚಿವರು

ನವಲಗುಂದ ನಗರದ ಶೆಟ್ಟರಕೆರೆಯ ಹತ್ತಿರ ಮಳೆ ನೀರು ಹೊರಚೆಲ್ಲಿ ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಂದರೆ ಮಾಡಿದ್ದ ಒಳಚರಂಡಿಯ ವೀಕ್ಷಣೆ ಬಳಿಕ ಪಕ್ಕದಲ್ಲಿರುವ ಡಬ್ಬಿ ಅಂಗಡಿಯಲ್ಲಿ ಜನ ಸಾಮಾನ್ಯರಂತೆ ಕುಳಿತು ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳ ಜೊತೆಯಲ್ಲಿ ಮಿರ್ಚಿ, ಮಂಡಕ್ಕಿ  ಸವಿದರು. ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಹಾಗೂ ಇತರರು ಸಾಥ ನೀಡಿದರು.

ಬೈಕ್ ಹತ್ತಿ ಪ್ರವಾಹ ಪ್ರದೇಶ ಸುತ್ತಿದ ಸಚಿವರು

ನವಲಗುಂದ ತಾಲೂಕಿನಲ್ಲಿ ಪ್ರವಾಹ ಪೀಡಿತ ಹಾಗೂ ಮಳೆ ಹಾನಿ ಪ್ರದೇಶ ವೀಕ್ಷಣೆ ಪ್ರವಾಸ ಕೈಗೊಂಡಿದ್ದ  ಸಂತೋಷ ಲಾಡ್ ಅವರು ಶಾಸಕ ಎನ್.ಎಚ್.ಕೋನರಡ್ಡಿ ಅವರೊಂದಿಗೆ ಹೀರೋ ಹೊಂಡಾ ಬೈಕ್ ಏರಿ ತಾಲೂಕಿನ ಕಾರ್ಲವಾಡ ಗ್ರಾಮದಲ್ಲಿ ಬೆಣ್ಣೆ ಹಳ್ಳದಿಂದ ಬಾಧಿತವಾಗುವ ಎಸ್.ಸಿ. ಕಾಲೋನಿ, ಲಕ್ಷ್ಮಿನಗರ ಪ್ರದೇಶಗಳನ್ನು ವೀಕ್ಷಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರ ಮಳೆಹಾನಿ ಪ್ರದೇಶ ವಿಕ್ಷಣೆ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಶಿಲ್ದಾರ ಸುದೀರ ಸಾಹುಕಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪನಿರ್ದೇಶಕ ಸಂದೀಪ,ತಾ ಪಂ ಇಒ ಭಾಗ್ಯಶ್ರೀ ಜಾಗೀದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಹಿರಿಯ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಕೋಟಿಮಠ, ಸಿಪಿಐ ಶಿವಾನಂದ ಕಟಗಿ ಸೇರಿದಂತೆ ಪಂಚಾಯತರಾಜ್ ಇಂಜನಿಯರಿಂಗ್, ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಲೋಕೋಪಯೋಗಿ ಇಲಾಖೆ, ನವಲಗುಂದ ಪುರಸಭೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

Back to top button