
ಪ್ರಗತಿವಾಹಿನಿ ಸುದ್ದಿ: ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಹೇಳಿಕೆ ವ್ಯಾಪಕ ಸದ್ದು ಮಾಡಿದ ಬೆನ್ನಲ್ಲೆ, ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ನಾನು ಹೇಳೇ ಇಲ್ಲ ಎಂದು ಅವರು ಯುಟರ್ನ್ ಹೊಡೆದಿದ್ದಾರೆ.
ಬಾದಾಮಿ ಅಭಿವೃದ್ಧಿಗೆ ಒಂದು ಯೋಜನೆ ಸಿದ್ಧ ಮಾಡಿ. ಅದು ಎಷ್ಟು ಮೊತ್ತದ್ದಾದರೂ ಪರವಾಗಿಲ್ಲ. ಅದು ಸಾವಿರ ಕೋಟಿ ಪ್ರಾಜೆಕ್ಟ್ ಆಗಿರಲಿ. ಪ್ರಸ್ತಾವನೆಗೆ ಸಿದ್ಧ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಿ. ಯಾಕೆಂದರೆ, ನಮ್ಮ ಬಳಿ ದುಡ್ಡಿಲ್ಲ. ಸಿದ್ದರಾಮಣ್ಣನ ಬಳಿ ದುಡ್ಡಿಲ್ವ ಇರೋ ಹಣದಲ್ಲಿ ನಿಮಗೆ ಈಗಾಗಲೇ ಅಕ್ಕಿ, ಬೇಳೆ, ಎಣ್ಣೆ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದರು.
ಅವರ ಹೇಳಿಕೆ ಬಗ್ಗೆ ತೀವ್ರ ಚರ್ಚೆ ಶುರುವಾಗುತ್ತಿದ್ದಂತೆ ಬಿಜೆಪಿಯವರು ಹೇಳಿಕೆಯನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಾನು ಹಣವಿಲ್ಲ ಎಂದು ಹೇಳಿಲ್ಲ. ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಬಾದಾಮಿ ಅಭಿವೃದ್ಧಿ ಬಾದಾಮಿ ಗುಹೆಗಳ ರಕ್ಷಣೆಗೆ ಅನುದಾನ 1 ಸಾವಿರ ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಎಂದು ಹೇಳಿದ್ದು ಅಷ್ಟೇ. ಇದರ ಅರ್ಥ ಒಂದು ಸಾವಿರ ಕೋಟಿ ಕೊಡಲು ನಮ್ಮಲ್ಲಿ ಹಣವಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಮ್ಮ ಬಜೆಟ್ ಗಾತ್ರ ದೊಡ್ಡದಿದೆ, ಗ್ಯಾರಂಟಿ ಮಾತ್ರವಲ್ಲ ನೀರಾವರಿ, ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಅನೇಕ ಜಿಲ್ಲೆಗಳ ಅಭಿವೃದ್ಧಿಗೆ ಹಣ ಖರ್ಚು ಮಾಡಿದ್ದೇವೆ. ಅಲ್ಲದೇ ಸರ್ಕಾರ ಇಷ್ಟೊಂದು ಸದೃಢವಾಗಿರುವ ನಮ್ಮ ಬಳಿ ದುಡ್ಡು ಇಲ್ಲ ಅಂತೀನಾ, ಅಷ್ಟು ಪ್ರಜ್ಞೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಸ್ತುಸ್ಥಿತಿ ಗೊತ್ತಿದೆ ನನಗಿಂತ ಚೆನ್ನಾಗಿ ಯಾರಿಗೆ ಅರ್ಥವಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನಾನು ಹಾಗೆ ಮಾತನಾಡುವುದಿಲ್ಲ. ನಾನು ಮಾತನಾಡಿದ್ದು ಬಿಜೆಪಿಯವರಿಗೆ ಅರ್ಥ ಆಗಿಲ್ಲ ಅಂದರೆ ಏನೂ ಮಾಡೋದಕ್ಕೆ ಆಗಲ್ಲ ಎಂದು ತಿಳಿಸಿದರು.