*ಬೆಳಗಾವಿ ಈಗ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಕೇಂದ್ರ: ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾವು ಸಾವಿರ ಬೆಡ್ ಆಸ್ಪತ್ರೆ ಮಾಡಲು ಹೊರಟಾಗ ಹಲವರು ವ್ಯಂಗ್ಯವಾಡಿದ್ದರು. ಬೆಳಗಾವಿಯಂತಹ ಸಣ್ಣ ಊರಿಗೆ ಇಷ್ಟು ದೊಡ್ಡ ಆಸ್ಪತ್ರೆ ಏಕೆ ಎಂದು ಪ್ರಶ್ನಿಸಿದ್ದರು. ಈಗ ಬೆಳಗಾವಿ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಕೇಂದ್ರವಾಗಿ ಬೆಳೆದಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಸೆಂಟ್ರಾಕೇರ್ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊದಲೆಲ್ಲ ಖಾಯಿಲೆಗಳು ಕಡಿಮೆ ಇದ್ದವು. ನದಿ ನೀರು ಕುಡಿದರೂ ಖಾಯಿಲೆ ಬರುತ್ತಿರಲಿಲ್ಲ. ಇಂದು ಸಂಸ್ಕರಿತ ನೀರು ಕುಡಿದರೂ ಖಾಯಿಲೆ ಬರುತ್ತದೆ. ಆರೋಗ್ಯ ವ್ಯಾಖ್ಯಾನ ಬದಲಾಗುತ್ತಿದೆ. ಹೆಚ್ಚು ಹೆಚ್ಚು ಆಸ್ಪತ್ರೆಗಳು ಬಂದಾಗ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸಲು ಸಾಧ್ಯ ಎಂದು ಕೋರೆ ಹೇಳಿದರು.
ಡಾ.ನೀತಾ ದೇಶಪಾಂಡೆ ನಮ್ಮ ಕೆಎಲ್ಇ ಸಂಸ್ಥೆಯ ವಿದ್ಯಾರ್ಥಿನಿ. ಅವರು ಈಗ ಸ್ವಂತ ಆಸ್ಪತ್ರೆ ಆರಂಭಿಸಿರುವುದು ನಮಗೂ ಹೆಮ್ಮೆ. ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಸೆಂಟ್ರಾಕೇರ್ ಆಸ್ಪತ್ರೆ ಜನರಿಗೆ ಒಳ್ಳೆಯ ಸೇವೆ ನೀಡಲಿ ಎಂದು ಹಾರೈಸಿದರು.
ಖ್ಯಾತ ಚಿತ್ರನಟ ನಾನಾ ಪಾಟೇಕರ್, ಶಿವಪ್ರತಿಷ್ಠಾನ್ ಹಿಂದುಸ್ತಾನ್ ಸಂಸ್ಥಾಪಕ ಸಂಭಾಜಿ ಭಿಡೆ ಗುರೂಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಾಜು ಸೇಠ್ ಮೊದಲಾದವರಿದ್ದರು.
ಡಾ.ನೀತಾ ದೇಶಪಾಂಡೆ ಹಾಗೂ ಡಾ.ಅಮೃತಾ ರಾಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ್ ಕರಂಜಿಕರ್ ಸ್ವಾಗತಿಸಿದರು. ರೋಹಿತ್ ದೇಶಪಾಂಡೆ ವಂದಿಸಿದರು.