
ಪ್ರಗತಿವಾಹಿನಿ ಸುದ್ದಿ: ಮರಣೋತ್ತರ ವರದಿ ತಿರುಚಿ ನೀಡಿ ಎಂದು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ಸೇರಿ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ಹಾವೇರಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗುರುರಾಜ್ ಬಿರಾದಾರ ಹಾಗೂ ಮಧ್ಯವರ್ತಿ ಚನ್ನಬಸವಯ್ಯ ಕುಲಕರ್ಣಿ ಬಂಧಿತ ಆರೋಪಿಗಳು.
ಹಾವೇರಿ ನಗರದ ಚಿರಾಯು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ವಂದನಾ ತುಪ್ಪದ ಎಂಬ ಬಾಲಕಿ ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿದ್ದಳು. ಈ ಬಗ್ಗೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಕಿ ಮರಣೋತ್ತರ ಪರೀಕ್ಷೆ ಬಳಿಕ ಡಾ.ಗುರುರಾಜ್ ಚಿರಾಯು ಆಸ್ಪತ್ರೆ ಸಂಪರ್ಕಿಸಿ ಆಸ್ಪತ್ರೆ ಪರವಾಗಿ ಉಪಕಾರಪೂರ್ಣ ವರದಿ ನೀಡುತ್ತೇನೆ. 5 ಲಕ್ಷ ಲಂಚ ನೀಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಆಸ್ಪತ್ರೆ ನಿರಾಕರಿಸಿದೆ.
ಬಳಿಕ ಮಧ್ಯವರ್ತಿ ಚನ್ನಬಸವ ಮೂಲಕ ಮತ್ತೆ ಸಂಪರ್ಕಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆ ವ್ಯವಸ್ಥಾಪಕ ಮಲ್ಲೇಶಪ್ಪ ಮುಪ್ಪಣ್ಣ ಮಾಸಣಗಿ ನೀಡಿದ ದೂರಿನ ಹಿನ್ನೆಲೆಯಲ್ಲಿ 3 ಲಕ್ಷ ಲಂಚದೊಂದಿಗೆ ವೈದ್ಯ ಗುರುರಾಜ್ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.