*ಜೀವನ ಗೌರವ, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ* *ಶಿಕ್ಷಕರು ಅಕ್ಷರ ತುಂಬುವ ಶಿಕ್ಷಕರಾಗದೇ ಕಲಿಕಾ ಸ್ಫೂರ್ತಿ ತುಂಬುವ ಶಿಕ್ಷಕರಾಗಬೇಕು: ಡಾ ಚಂದ್ರಕಾಂತ ವಾಘಮಾರೆ*


ಪ್ರಗತಿವಾಹಿನಿ ಸುದ್ದಿ, ಮಾರಿಹಾಳ (ಬೆಳಗಾವಿ)– ಪ್ರತಿಷ್ಠಾನ ಸ್ಥಾಪಿಸಿ ತನ್ಮೂಲಕ ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ದಿ.ನಾಗಪ್ಪ ಮಿಸಾಳೆ
ಪ್ರತಿಷ್ಠಾನದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರೊ.ಡಾ ಚಂದ್ರಕಾಂತ ವಾಘಮಾರೆ ಹೇಳಿದರು.
ಅವರು ಭಾನುವಾರ ಮಾರಿಹಾಳ ಗ್ರಾಮದಲ್ಲಿ ನಾಗಪ್ಪಾ ಮಿಸಾಳೆ ಪ್ರತಿಷ್ಠಾನದಿಂದ ಜೀವನ ಗೌರವ ಪುರಸ್ಕಾರ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಅಕ್ಷರ ತುಂಬುವ ಶಿಕ್ಷಕರಾಗದೇ ಕಲಿಕಾ ಸ್ಫೂರ್ತಿ ತುಂಬುವ ಶಿಕ್ಷಕರಾಗಬೇಕು. ನಮ್ಮ ಬದುಕಿಗೆ ಬೆಳಕು ನೀಡುವ ಗುರು ಎಂದೆಂದೂ ಪೂಜನೀಯ. ಈ ಸ್ಥಾನಕ್ಕೆ ಸಮವಾದದ್ದು ಬೇರೆಲ್ಲೂ ಸಿಗದು. ಪ್ರಶಸ್ತಿ ಅರಸಿ ಬರುವ ಶಿಕ್ಷಕರಾಗಬೇಕೇ ವಿನಹ ಶಿಕ್ಷಕರು ಪ್ರಶಸ್ತಿ ಅರಸುವದಾಗಬಾರದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗೋವಾದ ಸಾಕಳಿ ಸರ್ಕಾರಿ ಕಾಲೇಜಿನ ನಿವೃತ್ತ ಉಪಪ್ರಾಚಾರ್ಯ ಡಾ.ಕೃಷ್ಣಾ ಬಡಿಗೇರ ಮಾತನಾಡಿ, ಜಗತ್ತಿನ ಬಹುತೇಕ ಸಾಧಕರಲ್ಲಿ ಶಿಕ್ಷಕರನ್ನೇ ಕಾಣಬಹುದು. ಬಲಿಷ್ಟ ರಾಷ್ಟ್ರನಿರ್ಮಾಣ ಕೂಡ ಪರಿಪೂರ್ಣ ಮತ್ತು ಶ್ರೇಷ್ಟ ಶಿಕ್ಷಕರಿಂದ ಮಾತ್ರ ಸಾಧ್ಯ. ಅಂಥ ಶ್ರೇಷ್ಠ ಶಿಕ್ಷಕರಾಗಿ ನಾಡು ಬೆಳಗಿದ ಗುರು ದಿ. ನಾಗಪ್ಪ ಅವರಾಗಿದ್ದಾರೆ ಎಂದು ಹೇಳಿದರು.
ಅತಿಥಿಯಾಗಿದ್ದ ಡಾ ಗಜಾನನ ನಾಯ್ಕ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.
ಶಿಕ್ಷಕರಾದ ಪ್ರಭುನಗರದ ಶುಭಾ ಎಂ. ಭಟ್, ವಡಗಾವಿಯ ಸುಶೀಲಾ ಗುರವ, ಜನೇವಾಡಿಯ ಖಂಡು ಪಾಟೀಲ, ಬೆಳಗಾವಿಯ ಕವಿತಾ ಪರಮಾಣಿಕ, ಗೌಂಡವಾಡದ ಗಜಾನನ ಧಾಮಣೇಕರ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದರು. ಪರಶುರಾಮ ಬಾವು ನಂದಿಹಳ್ಳಿ, ಮನೋಹರ ಪಾಟೀಲ ಅವರಿಗೆ ಜೀವನ ಗೌರವ ನೀಡಲಾಯಿತು.
ರಮೇಶ ಮಿಸಾಳೆ ಅಧ್ಯಕ್ಷತೆ ವಹಿಸಿದ್ದರು. ಡಾ ಡಿ ಎನ್ ಮಿಸಾಳೆ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ವಿಷ್ಣುಪಂತ ಮಿಸಾಳೆ, ಕೃಷ್ಣಾ ಮಿಸಾಳೆ, ಗೋವಿಂದ ಮಿಸಾಳೆ, ಪ್ರಣೀಲ ಸಿದ್ಧೇಶ ಮಿಸಾಳೆ, ಸರೋಜಾ ದಳವಿ, ಶಾಮಲಾ ದಳವಿ, ವಿಜಯ ದಳವಿ, ಅಜೇಯ ದಳವಿ, ಸೇರಿದಂತೆ ಅಪಾರ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ರಾಜೇಶ ಸೊಗಲಿ, ಗೋವಿಂದ ಮಿಸಾಳೆ ನಿರೂಪಿಸಿದರು. ಸಿದ್ಧಾರ್ಥ ಮಿಸಾಳೆ ವಂದಿಸಿದರು.