Belagavi NewsBelgaum NewsKannada NewsKarnataka NewsLatestSports

*ಬೆಳಗಾವಿಯಿಂದಲೇ ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆಗೆ ಕೂಗು ಆರಂಭವಾಗಲಿ: ಎಂ.ಕೆ.ಹೆಗಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತವಾಗಿ ಘೋಷಿಸುವಂತೆ ಬೆಳಗಾವಿಯಿಂದಲೇ ಕೂಗು ಆರಂಭಿಸೋಣ ಎಂದು ಹಿರಿಯ ಪತ್ರಕರ್ತ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ ಕರೆ ನೀಡಿದ್ದಾರೆ.

ಬೆಳಗಾವಿಯ ಲೇಲೇ ಮೈದಾನದಲ್ಲಿ ಶುಕ್ರವಾರ, ಹಾಕಿ ಇಂಡಿಯಾ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಪಂದ್ಯಾವಳಿಯ ವಿಜೇತರಿಗೆ ಟ್ರೋಫಿ ವಿತರಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಪವಿತ್ರವಾದ ಲೇಲೇ ಮೈದಾನದಲ್ಲಿ ನಾವು ಹಾಕಿ ಇಂಡಿಯಾದ ಶತಮಾನೋತ್ಸವ ಆಚರಿಸುತ್ತಿದ್ದೇವೆ. ನೂರಾ ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದಿತ್ತು. ಭಾರತ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ಕೊಟ್ಟ ಜಾಗ ಇದು. ಈ ಸ್ಥಳದಿಂದಲೇ ಹಾಕಿಗೆ ರಾಷ್ಟ್ರೀಯ ಕ್ರೀಡೆ ಮಾನ್ಯತೆ ಕೂಗು ಆರಂಭವಾಗಲಿ ಎಂದು ಅವರು ಹೇಳಿದರು.

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಬಹಳಷ್ಟು ಜನರು ತಿಳಿದಿದ್ದಾರೆ. ಆದರೆ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯವೇ ಮಾಹಿತಿ ಹಕ್ಕು ಅಡಿಯಲ್ಲಿ ಸ್ಪಷ್ಟನೆ ನೀಡಿದೆ. ಈಗ ಶತಮಾನೋತ್ಸವದ ಸಂದರ್ಭದಲ್ಲಿ ನಾವು ಅಂತಹ ಬೇಡಿಕೆಯನ್ನು ಮುಂದಿಡಬೇಕು. ಬೆಳಗಾವಿಯ ಈ ನೆಲದಿಂದ ಕೂಗು ಆರಂಭಿಸಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಎಂ.ಕೆ.ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದು ಅವರು ಹೇಳಿದರು. `ಹಾಕಿ ಬೆಳಗಾವಿ’ ಹಾಕಿ ಕ್ರೀಡೆ ಉಳಿಸಿ, ಬೆಳೆಸಲು ನಿರಂತರ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

Home add -Advt

ಹಿರಿಯ ಸಾಮಾಜಿಕ ಕಾರ್ಯಕರ್ತೆ ಶೈಲಜಾ ಭಿಂಗೆ, ಹಾಕಿ ಬೆಳಗಾವಿ ಅಧ್ಯಕ್ಷ ಗೂಳಪ್ಪ ಹೊಸಮನಿ, ಕಾರ್ಯದರ್ಶಿ ಪ್ರಕಾಶ ಕಾಲಕುದ್ರೀಕರ್, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಮಲ್ಲೇಶ ಚೌಗಲೆ, ವಿಜಿಲೆನ್ಸ್ ಹೆಚ್ಚುವರಿ ಆಯುಕ್ತ ಸಾಗರ್ ದೇಶಪಾಂಡೆ, ಜಿ.ಜಿ. ಚಿಟ್ನಿಸ್ ಶಾಲೆಯ ಪ್ರಾಂಶುಪಾಲೆ ನವೀನ್ ಶೆಟ್ಟಿಗಾರ್, ಉಪಾಧ್ಯಕ್ಷೆ ಪೂಜಾ ಜಾಧವ, ಕಾರ್ಯದರ್ಶಿ ಸುಧಾಕರ ಚಳ್ಕೆ, ಅಮೋದ್ರಾಜ್ ಕ್ರೀಡಾಕೂಟದ ಮುಕುಂದ್ ಪುರೋಹಿತ್, ದತ್ತಾತ್ರೇ ಜಾಧವ, ಕೋಚ್ ಉತ್ತಮ ಶಿಂಧೆ, ಮನೋಹರ ಪಾಟೀಲ್, ನಾಮದೇವ ಸಾವಂತ, ವಿಕಾಸ ಕಲಘಟಗಿ, ಸಿದ್ಧಾರ್ಥ ಚಳ್ಕೆ, ಖಾನಾಪುರ ಕೋಚ್ ಗಣಪತ್ ಗಾವಡೆ, ಎಸ್.ಎಸ್.ಶಿ. ನಾರಗೋಡಿ, ಸುರೇಶ ಪೋತೆ, ಶ್ರೀಕಾಂತ ಅಜಗಾಂವಕರ, ಸಂದೀಪ ಪಾಟೀಲ, ರಾಜೇಂದ್ರ ಪಾಟೀಲ, ಅಶ್ವಿನಿ ಬಸ್ತವಾಡಕರ, ದೀಪಕ ವೆಸ್ನೆ, ತರಬೇತುದಾರ ಅಶ್ವಿನಿ ಪಾಟೀಲ, ಡಾ.ಗಿರಿಜಾಶಂಕರ ಮಾನೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 2 ದಿನಗಳ ಕಾಲ ನಡೆದ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ 7 ಶಾಲೆ- ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಅಮೋದ ರಾಜ್ ಭಿಂಗೆ ಪ್ರಾಯೋಜಕತ್ವ ವಹಿಸಿದ್ದರು.

ಕಾಲೇಜು ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ, ಬಾಲಕರ ವಿಭಾಗದಲ್ಲಿ ಗೋಗಟೆ ಕಾಲೇಜು ತಂಡ ವಿಜೇತರಾಗಿ, ಆರ್‌ಪಿಡಿ ಕಾಲೇಜು ರನ್ನರ್ ಅಪ್ ಆಗಿ ಮತ್ತು ಬಾಲಕಿಯರ ವಿಭಾಗದಲ್ಲಿ ಆರ್‌ಪಿಡಿ ವಿಜೇತರಾಗಿ ಮತ್ತು ಜಿಎಸ್‌ಎಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.

Related Articles

Back to top button