*ಮಚ್ಚೆ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ನ್ಯಾಯಾಧೀಶ ಸಂದೀಪ ಪಾಟೀಲ ಧಿಡೀರ್ ಭೇಟಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಚ್ಚೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಸೋಮವಾರ (ಡಿ.೨೨) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ನಿಲಯದ ಅಡುಗೆ ಮನೆ, ತರಗತಿ ಕೊಠಡಿ, ಶೌಚಾಲಯ, ಗ್ರಂಥಾಲಯ ಕೊಠಡಿಗೆ ಭೇಟಿ ನೀಡಿ, ಮಕ್ಕಳಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು ಶೌಚಾಲಯ ಮತ್ತು ವಸತಿ ನಿಲಯದ ಆವರಣದಲ್ಲಿ ಕಸ ಕಡ್ಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸವಲತ್ತುಗಳಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಮೆನು ಪ್ರಕಾರ ಊಟ, ತಿಂಡಿ ಉಪಹಾರ ನೀಡಬೇಕು. ಮಕ್ಕಳ ಭವಿಷ್ಯವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಸಿಬ್ಬಂದಿಗಳು ಸವಲತ್ತು-ಸೌಕರ್ಯಗಳನ್ನು ಒದಗಿಸಲು ನಿರ್ಲಕ್ಷಿಸಿದರೆ ಗಂಭೀರ ಕ್ರಮ ವಹಿಸಲಾಗುತ್ತದೆ ಎಂದು ವಸತಿ ನಿಲಯ ಸಿಬ್ಬಂದಿಗಳಿಗೆ ಸಂದೀಪ ಪಾಟೀಲ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ವಸತಿ ನಿಲಯದ ಪ್ರಾಂಶುಪಾಲರು, ನಿಲಯ ಪಾಲಕ ಚೇತನ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.



