
ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ
ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮೊದಲು ವಂದೇ ಮಾತರಂ ಗೀತೆ ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
‘ಜನಗಣಮನ’ದಂತೆ ‘ವಂದೇ ಮಾತರಂ’ ಗೀತೆಯ ಆರು ಚರಣಗಳನ್ನು ಕಡ್ಡಾಯಗೊಳಿಸಿದೆ. ಈ ಆದೇಶದ ಪ್ರಕಾರ, ಗೀತೆ ನುಡಿಸಿದಾಗ ಅಥವಾ ಹಾಡಿದಾಗ ಎಲ್ಲರೂ ಎದ್ದು ನಿಲ್ಲಬೇಕು. ಇದು ತ್ರಿವರ್ಣ ಧ್ವಜಾರೋಹಣ, ರಾಷ್ಟ್ರಪತಿಗಳ ಭಾಷಣದಂತಹ ಸಂದರ್ಭಗಳಲ್ಲಿ ಅನ್ವಯಿಸುತ್ತದೆ. ವಂದೇ ಮಾತರಂಗೆ ಅಧಿಕೃತ ಶಿಷ್ಟಾಚಾರ ಕಲ್ಪಿಸಿದ್ದು, ಶಾಲೆಗಳಲ್ಲಿಯೂ ಹಾಡಲು ಸಲಹೆ ನೀಡಲಾಗಿದೆ.
ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ಹೇಳಲಾಗಿದೆ. ಹಾಗೆಯೇ ಗೀತೆಯನ್ನು ನುಡಿಸಿದರೆ ಅಥವಾ ಹಾಡಿದರೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ತಿಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ತನ್ನ ನಿರ್ದೇಶನದಲ್ಲಿ ಆರು ಚರಣಗಳನ್ನು ವಂದೇ ಮಾತರಂ’ ಗೀತೆಯ 3.10 ನಿಮಿಷಗಳ ಗೀತೆಯನ್ನು ನುಡಿಸಬೇಕು ಅಥವಾ ಹಾಡಬೇಕು ಎಂದು ಹೇಳಿದೆ. ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ. ಯಾವುದೇ ಸಾಕ್ಷ್ಯಚಿತ್ರಗಳ ಪ್ರದರ್ಶನಗಳ ಮಧ್ಯೆ ಗೀತೆ ಹಾಡಿದರೆ ಎದ್ದುನಿಲ್ಲುವ ಅಗತ್ಯವಿಲ್ಲ.
6 ಚರಣಗಳಿರುವ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯ ಈ ನಿರ್ದೇಶನವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಲಾಗಿದೆ.
ಈ ವರ್ಷ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ 150 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಲಾಗಿದೆ.
ಬಂಕಿಮ್ ಚಂದ್ರ ಚಟರ್ಜಿ 1875 ರಲ್ಲಿ ದೇಶಭಕ್ತಿ ಗೀತೆ ‘ವಂದೇ ಮಾತರಂ’ ಗೀತೆ ರಚಿಸಿದರು. ಈ ಸಂಯೋಜನೆಯ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ವರದಿಗಳ ಪ್ರಕಾರ, ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸುವ ‘ಸೇವ್ ದಿ ಕ್ವೀನ್’ ಎಂಬ ಹಾಡನ್ನು ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಇದು ಬಂಕಿಮ್ ಚಂದ್ರ ಸೇರಿದಂತೆ ಅನೇಕ ದೇಶವಾಸಿಗಳನ್ನು ಕೆರಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು 1874 ರಲ್ಲಿ ವಂದೇ ಮಾತರಂ ಎಂಬ ಹಾಡನ್ನು ರಚಿಸಿದರು.
ಈ ಹಾಡಿನ ಕೇಂದ್ರ ವಿಷಯವೆಂದರೆ ಭಾರತದ ಭೂಮಿಯನ್ನು ತಾಯಿ ಎಂದು ಸಂಬೋಧಿಸುವುದು. ಈ ಹಾಡನ್ನು ನಂತರ ಅವರ 1882 ರ ಕಾದಂಬರಿ ‘ಆನಂದಮಠ’ದಲ್ಲಿ ಸೇರಿಸಲಾಯಿತು. ಐತಿಹಾಸಿಕ ಮತ್ತು ಸಾಮಾಜಿಕ ರಚನೆಗಳಿಂದ ಹೆಣೆಯಲಾದ ಈ ಕಾದಂಬರಿಯು ದೇಶದಲ್ಲಿ ರಾಷ್ಟ್ರೀಯತೆಯ ಚೈತನ್ಯವನ್ನು ಜಾಗೃತಗೊಳಿಸಲು ಗಮನಾರ್ಹವಾಗಿ ಕೊಡುಗೆ ನೀಡಿತು.
ವಂದೇ ಮಾತರಂ ಅನ್ನು ಮೊದಲ ಬಾರಿಗೆ ಹಾಡಿದ್ದು 1896 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಲ್ಪಾವಧಿಯಲ್ಲಿಯೇ, ದೇಶಭಕ್ತಿಯ ಸಂಕೇತವಾದ ಈ ಹಾಡು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯ ಕ್ರಾಂತಿಕಾರಿಗಳ ನೆಚ್ಚಿನ ಹಾಡು ಮತ್ತು ಮುಖ್ಯ ಘೋಷಣೆಯಾಯಿತು.




