ಶಬರಿಮಲೆ ವಿವಾದ: ಜ. 17ರಂದು ವಕೀಲರ ಸಭೆಗೆ ಸುಪ್ರೀಂ ಸೂಚನೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ವಕೀಲರು ಸಭೆ ನಡೆಸಿ ಚರ್ಚಿಸಿ ನಿರ್ಧಾರಕ್ಕೆ ಬರಲು ಸೂಚಿಸಿರುವ ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.

ಇಂದು ಮರುಪರಿಶೀಲನಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ, ಅಯೋಧ್ಯೆ ಪ್ರಕರಣದ ಮಾದರಿಯಲ್ಲಿ ವಿಚಾರಣೆ ನಡೆಯಲಿ. ಏಳು ಅಂಶಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾದ ಮಂಡಿಸಬೇಕು. ಯಾರು ಯಾವ ಅಂಶ ವಾದಿಸಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಹೀಗಾಗಿ ಇಂದು ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜ. 17ರಂದು ವಕೀಲರ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿ ಎಂದು ಹೇಳಿದೆ.

ಹಿಂದಿನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಎತ್ತಿರುವ 7 ಪ್ರಶ್ನೆಗಳನ್ನು ಪರಿಗಣಿಸಿ, ಎಲ್ಲಾ ವಿಷಯಗಳ ಕುರಿತು ಚರ್ಚೆ ನಡೆಸಲು ಎಲ್ಲಾ ನ್ಯಾಯಾಧೀಶರ ಸಭೆಯನ್ನು ಇದೇ 17ರಂದು ಕರೆಯಬೇಕು ಎಂದು ಸುಪ್ರೀಂ ಕೋರ್ಟ್ ನ ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶ ನೀಡಿದೆ.

ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ತೋರಿಸಲಾಗುತ್ತದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಾಗೂ ಈ ಪ್ರಕರಣದ ಅರ್ಜಿಯನ್ನು ಕೂದ ಮೂರು ವಾರಗಳ ನಂತರ ವಿಚಾರಣೆ ನಡೆಸಲಾಗುವುದು ಎಂದು ಕೂಡ ಹೇಳಿದೆ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಆಗಿದ್ದ ಮೇಲ್ಮನವಿಯನ್ನು ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐದು ಸದಸ್ಯರ ಪೀಠ ವಿಚಾರಣೆ ನಡೆಸಿ ನವೆಂಬರ್​ 14ರಂದು ತೀರ್ಪು ಪ್ರಕಟಿಸಿತ್ತು. ಧರ್ಮ ಹಾಗೂ ಸಮಾಜದಲ್ಲಿ ಪುರುಷ ಹಾಗೂ ಮಹಿಳೆ ಸರಿಸಮಾನರಾಗಿದ್ದು, ಇಬ್ಬರಿಗೂ ಸಮಾನ ಹಕ್ಕಿದೆ. ಇದು ಭಾವನಾತ್ಮಕ ವಿಚಾರವಾಗಿರುವುದರಿಂದ ಧರ್ಮದ ವಿಮರ್ಶೆಗೆ ಅರ್ಜಿ ಹಾಕಲಾಗಿದೆ ಎಂದು ರಂಜನ್​ ಗೋಗೋಯ್​ ಅಭಿಪ್ರಾಯಪಟ್ಟಿದ್ದರು. ಅಲ್ಲದೆ ಈ ಪ್ರಕರಣವನ್ನು 9 ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿದ್ದರು.

ಇದೀಗ ಸಿಜೆಐ ಬೋಬ್ಡೆ ನೇತೃತ್ವದ 9 ಸದಸ್ಯರ ಪೀಠ 60 ಮರು ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮಾಡಬೇಕಿದೆ. ನ್ಯಾ. ಆರ್​ ಭಾನುಮತಿ, ನ್ಯಾ. ಅಶೋಕ್​ ಭೂಷಣ್​, ನ್ಯಾ. ನಾಗೇಶ್ವರ್​ ರಾವ್​, ನ್ಯಾ. ಎಂ.ಎಂ. ಶಾಂತಗೌಡರ್​, ನ್ಯಾ. ಎಸ್​.ಎ ನಜೀರ್​, ನ್ಯಾ. ಆರ್​. ಸುಭಾಶ್​ ರೆಡ್ಡಿ, ನ್ಯಾ. ಬಿ.ಆರ್​. ಗವೈ ಮತ್ತು ನ್ಯಾ. ಸೂರ್ಯ ಕಾಂತ್​ ಈ ಪೀಠದಲ್ಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button