
ಪ್ರಗತಿವಾಹಿನಿ ಸುದ್ದಿ: ಅಂತರ್ಜಾತಿ ಪ್ರೇಮ ವಿವಾಹದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ನಂತರ ಯುವತಿಯನ್ನು ಪೋಷಕರೆ ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಹಾವೇರಿ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕುಟುಂಬಗಳ ವಿರೋಧ ನಡುವೆಯೇ ಮದುವೆಯಾದ ಯುವತಿಯನ್ನು ಪೋಷಕರು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದ ಮಣಿಕಂಠಸ್ವಾಮಿ ಮತ್ತು ಕೊಪ್ಪ ಗ್ರಾಮದ ಸೃಷ್ಠಿ ಇಬ್ಬರೂ ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಜಾತಿ ಭಿನ್ನತೆಯ ಕಾರಣದಿಂದ ಇವರ ಸಂಬಂಧಕ್ಕೆ ಕುಟುಂಬಗಳಿಂದ ಒಪ್ಪಿಗೆ ಇರಲಿಲ್ಲ. ಹೀಗಾಗಿ ಇಬ್ಬರೂ ಎರಡು ದಿನಗಳ ಹಿಂದೆ ದೇವಸ್ಥಾನದಲ್ಲಿ ಶಾಸ್ತೋಕ್ತವಾಗಿ ಸಪ್ತಪದಿ ತುಳಿದು ವಿವಾಹವಾಗಿದ್ದರು.
ನಂತರ ಮದುವೆಯನ್ನು ಕಾನೂನುಬದ್ದವಾಗಿ ನೋಂದಾಯಿಸಿಕೊಂಡು ಕಚೇರಿಯಿಂದ ಹೊರಟಾಗ, ಯುವತಿಯ ಕುಟುಂಬಸ್ಥರು ಅವರ ಕಾರನ್ನು ಹಿಂಬಾಲಿಸಿ ತಡೆದಿದ್ದಾರೆ.
ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯ ವಿರೋಧದ ನಡುವೆಯೂ ಆಕೆಯನ್ನು ಎಳೆದೊಯ್ದರೆಂಬ ಆರೋಪ ಕೇಳಿಬಂದಿದೆ.
ಪತ್ನಿಯನ್ನು ಮರಳಿ ಕಳುಹಿಸುವಂತೆ ಮಣಿಕಂಠಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. ಈ ಘಟನೆ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.


