*ಬಿಸಿಲಿಗೆ ಪಶುಗಳಲ್ಲಿ ಸಮಸ್ಯೆ: ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಹಲವೆಡೆ ಉಷ್ಣತೆಯ ಒತ್ತಡದಿಂದಾಗಿ ಪಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಹಾಗೂ ಉತ್ಪಾದನೆಯಲ್ಲಿ ಇಳಿಕೆ ಕಾಣಬಹುದು. ಕಿರಿಯ, ಗರ್ಭಿಣಿ, ಹಾಲುಕೊಡುವ, ರೋಗ ಪೀಡಿತ ಹಾಗೂ ಹೆಚ್ಚು ಹಾಲು ಕೊಡುವ ಪಶುಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತವೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಾಹಿತಿ ನೀಡಿದೆ.
ಪಶುಗಳಲ್ಲಿ ದುರ್ಬಲತೆ, ಹೆಚ್ಚು ಉಸಿರಾಟ, ಆಹಾರ ಆಸಕ್ತಿ ಕಡಿಮೆ, ನೆರಳನ್ನು ಹುಡುಕುವುದು ಹಾಲಿನ ಉತ್ಪಾದನೆ ಇಳಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು
ಬೆಳಿಗ್ಗೆ 11 ರಿಂದ ಮಧ್ಯಾಹ್ನ 4 ರವರೆಗೆ ಹೊರಗೆ ಬಿಡದೆ ನೆರಳಿನಲ್ಲಿ ಇರಿಸಬೇಕು. ಸಾಕಷ್ಟು ಶುದ್ಧ ಮತ್ತು ತಂಪಾದ ನೀರನ್ನು ಸದಾ ಒದಗಿಸಬೇಕು. ಜಾನುವಾರು ಕೊಟ್ಟಿಗೆಯು ಉತ್ತಮ ಗಾಳಿಯ ಹರಿವು ಹೊಂದಿರಬೇಕು. ಫ್ಯಾನ್, ಗೋಣಿಚೀಲಗಳ ಮೂಲಕ ತಂಪು ವ್ಯವಸ್ಥೆ ಮಾಡುವುದು ಅಗತ್ಯ ಆಹಾರವನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನೀಡಬೇಕು. ಹಸಿರು ಮೇವು, ಖನಿಜಮಿಶ್ರಣ ಹಾಗೂ ಆಹಾರದಲ್ಲಿ ಉಪ್ಪು ಸೇರಿಸುವುದು ಉತ್ತಮ.
ಪಶುಗಳ ಆರೋಗ್ಯ ರಕ್ಷಣೆಗಾಗಿ ನೀರು, ನೆರಳು, ತಂಪು ಮತ್ತು ಸಮರ್ಪಕ ಆಹಾರ ಎಂಬ ನಾಲ್ಕು ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



