*ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈ ಜೊಡಿಸಿ: ಡಾ.ಸಂದೀಪ ಶ್ರೀವಾಸ್ತವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಷಯರೋಗವು ಅತೀ ಪುರಾತನವಾದ ರೋಗವಾಗಿದ್ದು, ಅನಾಧಿಕಾಲದಿಂದಲು ನಿಯಂತ್ರಣಕ್ಕಾಗಿ ಸಂಶೋಧನೆಗಳು ನಡೆಯುತ್ತಲೇ ಬಂದಿವೆ. ಕ್ಷಯರೋಗವನ್ನು ನಾವು ನಿಮೂರ್ಲನೆ ಮಾಡಬೇಕಾದರೆ ಜನರು ಹಾಗೂ ಸಂಘ ಸಂಸ್ಥೆಗಳು ಸಾಮೂಹಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಎಲ್ಲರೂ ಕ್ಷಯ ಮುಕ್ತ ಭಾರತ ಚಟುವಟಿಕೆಗಳಿಗೆ ಕೈ ಜೋಡಿಸಬೇಕು ಎಂದು ಕಹೇರ್ ಜೆ. ಎನ್. ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಪ್ರೋ. ಡಾ. ಸಂದೀಪ ಶ್ರೀವಾಸ್ತವ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯರೋಗ ನಿಯಂತ್ರಣ ವಿಭಾಗ ವೈದ್ಯಕೀಯ ವಿಜ್ಞಾನ ಸಂಸ್ಥೆ, KAHER’S ಜೆ. ಎನ್. ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ (ಮಾ.24) ಜೆ. ಎನ್. ವೈದ್ಯಕೀಯ ಮಹಾವಿದ್ಯಾಲಯದ ಮೈಕ್ರೋಬಾಯೋಲಾಜಿ ಹಾಗೂ ಶ್ವಾಸಕೋಶ ವಿಭಾಗದಲ್ಲಿ ಆಯೋಜಿಸಲಾಗಿತ್ತು.
ಬೆಳಗಾವಿಯ ಕಹೇರ್ ಜೆ. ಎನ್. ವೈದ್ಯಕೀಯ ಮಹಾವಿದ್ಯಾಲಯದ ರಿಜಿಸ್ಟ್ರಾರ್ ಡಾ. ವಿ. ಎಂ. ಪಟ್ಟಣಶೆಟ್ಟಿ ಮಾತನಾಡಿ ಸರ್ಕಾರಿ ಸಂಸ್ಥೆಗಳು ಕ್ಷಯರೋಗ ನಿಯಂತ್ರಣಕ್ಕಾಗಿ 1962 ರಿಂದಲೂ ನಿರಂತರವಾಗಿ ಪ್ರಯತ್ನಿಸುತ್ತಿವೆ. ಖಾಸಗಿ ಆರೋಗ್ಯ ಸಂಸ್ಥೆಗಳು ಸರ್ಕಾರಗಳೊಂದಿಗೆ ಕೈಜೋಡಿಸಿ ಕ್ಷಯರೋಗ ನಿರ್ಮೂಲನೆ ಚಟುವಟಿಕೆಗಳನ್ನು ಜಂಟಿಯಾಗಿ ನಿರ್ವಹಿಸಿದಲ್ಲಿ ನಾವು ಯಶಸ್ಸು ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಐ.ಪಿ. ಗಡಾದ ಮಾತನಾಡಿ ಕ್ಷಯರೋಗ ನಿರ್ಮೂಲನೆ ಆಗಬೇಕಾದರೆ ವೈದ್ಯಕೀಯ ಮಹಾವಿದ್ಯಾಲಯಗಳು, ಖಾಸಗಿ ಆರೋಗ್ಯ ಸಂಸ್ಥೆಗಳು ಹಾಗೂ ಆರೋಗ್ಯ ಮತ್ತು ಕು.ಕ. ಇಲಾಖೆ ಜಂಟಿಯಾಗಿ ಕಾರ್ಯಚಟುವಟಿಕೆಗಳನ್ನು ಆಯೋಜಿಸಿ ಅನುಷ್ಠಾನಗೊಳಿಸಿದಲ್ಲಿ ಸಾಧ್ಯವಾಗಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಡಾ. ಚಾಂದಿನಿ ಜಿ. ದೇವಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನ ಮಂತ್ರಿಗಳು ಇಂದು ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ಅಭಿಯಾನದಲ್ಲಿ ದೇಶ್ಯಾದ್ಯಂತ 732 ಜಿಲ್ಲೆಗಳ 6704 ತಾಲೂಕುಗಳ 134044 ಗ್ರಾಮ ಪಂಚಾಯತಿ ವ್ಯಾಪ್ತಿಯ 158377 ಗ್ರಾಮಗಳನ್ನು ಸೂಕ್ಷ್ಮ ಗ್ರಾಮಗಳೆಂದು ಗುರುತಿಸಿ ಕ್ಷಯ ತಪಾಸಣೆಗೆ ಮುಂಬರುವ ನೂರು ದಿನಗಳಲ್ಲಿ ಕ್ಷಯರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
“ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು”( Slogan “Yes! We Can End TB. Led by Bharat. Powered by Janbhagidari.) ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಕಹೇರ್ ಜೆ. ಎನ್. ವೈದ್ಯಕೀಯ ಮಹಾವಿದ್ಯಾಲಯ ಉಪ ಕುಲಪತಿಗಳಾದ ಪ್ರೋ. ಸಂದೀಪ ಶ್ರೀವಾಸ್ತವ, ರಿಜಿಸ್ಟಾರ್ ಡಾ.ವಿ. ಎಂ. ಪಟ್ಟಣಶೆಟ್ಟಿ, ಉಪ ಪ್ರಾಂಶುಪಾಲರು ಡಾ.ನಯನಾ ಹಾಸಿಲಕರ, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಐ. ಪಿ. ಗಡಾದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಡಾ.ಚಾಂದಿನಿ ಜಿ. ದೇವಡಿ ಹಾಗೂ ಭಾರತಿಯ ವೈದ್ಯಕೀಯ ಸಂಘದ ಪ್ರತಿನಿಧಿಯಾಗಿ ಡಾ.ಸಂತೋಷ ಗಾಡದವರ, ಶ್ವಾಸಕೋಶ ವಿಭಾಗದ ಮುಖ್ಯಸ್ಥರು ಪ್ರೋ. ಭಾಗ್ಯಶ್ರೀ ಪಾಟೀಲ, ಮೈಕ್ರೋಬಾಯೋಲಾಜಿ ವಿಭಾಗದ ಮುಖ್ಯಸ್ಥರು ಪ್ರೋ. ಶಿತಲ ಹರಕುಣಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಜೆ. ಎನ್. ವೈಧ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಸಯಂಸೇವಕರು ಉಪಸ್ಥಿತರಿದ್ದರು.



