
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಗಕಲೆ ನೈಜ ಜೀವಂತ ಕಲೆಯಾಗಿದ್ದು, ಬಹಳ ಹಿಂದಿನಿಂದಲೂ ಬಂದಿರುವ ರಂಗನಾಟಕ ಕಲೆ ಮುಂದಿನ ಜನಮಾನಸಕ್ಕೆ ನಾಟಕ ಪರಂಪರೆ ಉಳಿಸಲು ಕಲಾವಿದರಿಗೆ ಪ್ರತಿಯೊಬ್ಬರು ಉತ್ತೇಜನ ನೀಡಿ ಬೆಳೆಸಬೇಕೆಂದು ರಂಗಕರ್ಮಿಗಳು, ವಿಶ್ರಾಂತ ಧರ್ಮಿಕ ದತ್ತಿ ಇಲಾಖೆ ಉಪಾಯುಕ್ತರಾದ ರವಿ ಕೊಟಾರಗಸ್ತಿ ರಂಗಾಸಕ್ತರಿಗೆ ಕರೆ ನೀಡಿದರು.
ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ರಂಗದರ್ಶನ ಗ್ರಾಮೀಣ ವಿಕಾಸ ಸಂಘ, ಧುಳಗನವಾಡಿ , ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಬೆಳಗಾವಿಯ ಮಹಾಂತ ಭವನದಲ್ಲಿ ಜರುಗಿದ ವಿಶ್ವ ರಂಗಭೂಮಿ ದಿನಾಚರಣೆ 2026 ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಅಥಿತಿಗಳಾಗಿ ಆಗಮಿಸಿದ ಹಿರಿಯ ಸಾಹಿತಿ, ಕನ್ನಡ ಉಪನ್ಯಾಸಕರಾದ ಡಾ. ಎಚ್. ಬಿ. ಕೋಲ್ಕಾರ ಇವರು ಮಾತನಾಡಿ ಬೆಳಗಾವಿ ಪರಿಸರದಲ್ಲಿ ಪೌರಾಣಿಕ, ಸಾಮಾಜಿಕ, ಭಕ್ತಿಪ್ರಧಾನ, ನಾಟಕ ನೀಡಿದ ಜಿಲ್ಲೆಯ ಕೊಡುಗೆಯಾಗಿದ್ದು, ರಾಷ್ಟ್ರೀಯ ಯುದ್ಧ ನಿಲ್ಲಿಸುವಲ್ಲಿ ಸಮಾನ ಭಾತೃತ್ವವನ್ನು ಬೆಳೆಸಲು ರಂಗಭೂಮಿಯ ಪಾತ್ರ ಅನನ್ಯವಾದದ್ದು, ಇಂದಿನ ಆಧುನಿಕತೆಯಲ್ಲಿ ಕುಟುಂಬ ಸಮೇತ ನೋಡುವ ಸೃಜನಶೀಲ ನಾಟಕಗಳು ಮೂಡಿಬರಬೇಕೆಂದು ಆಶಯ ವ್ಯಕ್ತ ಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿಗಳು ನಾಟಕಕಾರರಾದ ಯ. ರು. ಪಾಟೀಲ ಇವರು ಮಾತನಾಡಿ ಬದುಕಿನ ಜೀವನ ಸರಳವಾಗಿ ನಡೆಸಲು ರಂಗಭೂಮಿ ನಾಟಕ ಕಲೆ ಸಹಕಾರಿಯಾಗುತ್ತದೆ. ಕಲೆ, ಕಲಾವಿದ ಉಳಿದಾಗ ಕಲೆ ಶಾಶ್ವವಾಗಿ ಉಳಿಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಂಗಸಾಧಕರಾದ ಜಿ.ಕೆ. ಕಾಡೇಶಕುಮಾರ- ಗೋಕಾಕ, ಶಂಕರ ಅ. ಅರಕೇರಿ- ಬೆಳಗಾವಿ, ಸುಜಾತಾ ಮಗದುಮ್ಮ- ಚಿಕ್ಕೋಡಿ, ಅನೀಲ ಮೇತ್ರಿ- ಬೆಳಗಾವಿ ಕಲಾವಿದರಿಗೆ ಶಾಲು ಹೋದಿಸಿ ಸ್ಮರಣಿಕೆ ನೀಡಿ ರಂಗ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಆರ್. ಆಂಜನೇಯ, ಪ್ರಾಚಾರ್ಯರಾದ ನಿರ್ಮಲಾ ಬಟ್ಟಲ, ಸಾಹಿತಿಗಳಾದ ಡಾ. ಹೆಚ್. ಆಯ್. ತಿಮ್ಮಾಪೂರ, ಬಸವರಾಜ ಕುಪ್ಪಸಗೌಡರ ಉಪಸ್ಥಿತರಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಸದಸದ್ಯರಾದ ಬಾಬಾಸಾಹೇಬ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ರಂಗ ಸಂದೇಶ ಓದಿ ಸ್ವಾಗತಿಸಿದರು.ಬಸವರಾಜ ತಳವಾರ ಕಾರ್ಯಕ್ರಮ ನಿರೂಪಿಸಿದರು. ಭರತ ಕಲಾಚಂದ್ರ ವಂದಿಸಿದರು.
ನಂತರ ನಡೆದ ಸಂಶ್ಕೃತಿಕ ಕಾರ್ಯಕ್ರಮಲ್ಲಿ ಶಶಿಕಾಂತ ಜಂಗಿ ರಂಗಗೀತೆ ಪ್ರಸ್ತುತಪಡಿಸಿದರು. ಆಶಾದೀಪ ಸಮುದಾಯ ಕಲಾಕೇಂದ್ರ ಚಿಕ್ಕೋಡಿ ತಂಡದವರು ಬೀದಿನಾಟಕ ಪ್ರಸ್ತುತಪಡಿಸಿದರು.




