ಬಿಸಿಲ ನಾಡಿನಲ್ಲಿ ಸಾಹಿತ್ಯ ಜಾತ್ರೆಗೆ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ; ಕಲಬುರಗಿ: ಬಿಸಿಲು ನಾಡು ಕಲಬುರಗಿಯಲ್ಲಿ ಫೆಬ್ರವರಿ 5, 6 ಮತ್ತು 7 ರಂದು ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ನೊಂದಾಯಿತ ಪ್ರತಿನಿಧಿಗಳು ಆಗಮಿಸಲಿದ್ದು, ಅವರಿಗೆ ಟ್ರಾವೆಲಿಂಗ್ ಬ್ಯಾಗ್ ನೀಡುವ ಸಂದರ್ಭದಲ್ಲಿ ಯಾವುದೇ ಗೊಂದಲವಾಗದಂತೆ ಸೂಕ್ತ ಭದ್ರತಾ ಸಿಬ್ಬಂದಿ ನೇಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿ ಅಧ್ಯಕ್ಷ ತಿಪ್ಪಣಪ್ಪ ಕಮಕನೂರ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೂರದಿಂದ ಬರುವ ನೊಂದಾಯಿತ ಪ್ರತಿನಿಧಿಗಳಿಗೆ ಗೌರವದಿಂದ ಕಾಣುವಂತೆಯೂ ಅವರು ಸಲಹೆ ನೀಡಿದರು.
ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಮಾತನಾಡಿ ನೊಂದಾಯಿತ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳಿಗೆ ನೆನಪಿನಂಗಳದಲ್ಲಿ ಉಳಿಯುವಂತೆ ಪೆನ್ನು, ಪ್ಯಾಡ್ ಒಳಗೊಂಡ ಉತ್ತಮ ಗುಣಮಟ್ಟದ ಟ್ರಾವೆಲಿಂಗ್ ಬ್ಯಾಗ್ ವಿತರಣೆ ಮಾಡಬೇಕು. ಅಂದಾಜು 25 ಸಾವಿರ ನೊಂದಾಯಿತರಿಗೆ ಬ್ಯಾಗ್ ವಿರಿಸಲಾಗುತ್ತದೆ ಎಂದರು.

ನೊಂದಣಿ ಸಮಿತಿಯ ಕಾರ್ಯಾಧ್ಯಕ್ಷ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಮೇಶ ಸಂಗಾ ಮಾತನಾಡಿ ಈ ಬಾರಿ ಸಮ್ಮೇಳನದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಪಾಡಲು ಪ್ರತಿ ರಸೀದಿಗಳ ಮೇಲೆ ಬಾರ್‍ಕೋಡ್ ಅಳವಡಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಾರಕೋಡ್ ಇಲ್ಲದ ನೋಂದಣಿ ರಸೀದಿಗಳು ನೀಡಲಾಗಿದೆ ಎಂಬ ಮಾಹಿತಿ ಬಂದಿರುವುದರಿಂದ ಬಾರ್‍ಕೋಡ್ ಹೊಂದಿರುವ ಹಾಗೂ ಬಾರ್ ಕೋಡ್ ಇಲ್ಲದÀ ರಸೀದಿಗಳಿಗೆ ಪ್ರತ್ಯೇಕವಾದ ಕೌಂಟರ್‍ಗಳನ್ನು ತೆರೆಯುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದು ಸಭೆಗೆ ತಿಳಿಸಿದರು.

ಟ್ರಾವೆಲಿಂಗ್ ಬ್ಯಾಗ್ ಮತ್ತು ಬ್ಯಾಡ್ಜಸ್ ಫೈನಲ್: ನೊಂದಾಯಿತ ಪ್ರತಿನಿಧಿಗಳು ಸೇರಿದಂತೆ ಇನ್ನಿತರರಿಗೆ ವಿತರಿಸಲಾಗುವ ಬ್ಯಾಗ್ “ಟ್ರಾವೆಲಿಂಗ್ ಬ್ಯಾಗ್” ಆಗಿರಬೇಕು ಎಮದು ನಿರ್ಣಯ ಕೈಗೊಂಡ ಸಮಿತಿ ಟ್ರಾವೆಲಿಂಗ್ ಬ್ಯಾಗ್ ಮತ್ತು ಸಮ್ಮೇಳನದಲ್ಲಿ ನೀಡಲಾಗುವ ಬ್ಯಾಡ್ಜಸ್ ವಿನ್ಯಾಸಗಳಿಗೂ ಇಂದು ಸರ್ವ ಸಮ್ಮತದಿಂದ ಅನುಮೋದನೆ ನೀಡಿತು. ಟ್ರಾವೆಲಿಂಗ್ ಬ್ಯಾಗ್ ಮೇಲೆ ಹಳದಿ ಮತ್ತು ಕೆಂಪು ಬಣ್ಣದ ಪಟ್ಟಿ ಇರಲಿದ್ದು, ಪಟ್ಟಿಯ ಮೇಲ್ಭಾಗದಲ್ಲಿ ಸಮ್ಮೇಳನದ ಲಾಂಛನ ಇರಲಿದೆ. ಇನ್ನೂ ಬ್ಯಾಡ್ಜಸ್ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಮಧ್ಯದಲ್ಲಿ ಸಮ್ಮೇಳನ ಲಾಂಛನ ರಾರಾಜಿಸಲಿದೆ.

ಸೂಕ್ತ ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬ್‍ನ್ಯಾಂಗ್ ಮಾತನಾಡಿ ರಾಜ್ಯದಾದ್ಯಂತ ಬರುವ ನೊಂದಣಿ ಪ್ರತಿನಿಧಿಗಳಿಗೆ ಬ್ಯಾಗ್ ವಿತರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಈಗಾಗಲೆ ಪೂರ್ವಸಿದ್ಧತೆ ಪೊಲೀಸ್ ಇಲಾಖೆ ಮಾಡಿಕೊಂಡಿದೆ. ಇದಲ್ಲದೆ ಅಲ್ಲಲ್ಲಿ ಸಿ.ಸಿ.ಟಿ.ವಿ., ಡ್ರೋಣ್ ಕ್ಯಾಮೆರಾ ಸಹ ಮುಂಜಾಗ್ರತಾ ಕ್ರಮವಾಗಿ ಅಳವಡಿಸಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕರಾವ ರಘೋಜಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮುನಾವರ್ ದೌಲಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಬನ್ಸಿ ಪವಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ್, ಕಸಾಪ ಪ್ರತಿನಿಧಿ ಅಂಬಾಜಿ ಕವಲಗಾ ಸೇರಿದಂತೆ ಸಮಿತಿಯ ಇನ್ನಿತರ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button