
ಪ್ರಗತಿವಾಹಿನಿ ಸುದ್ದಿ: ಹೈದರಾಬಾದ್ನಿಂದ ಹುಬ್ಬಳ್ಳಿಗೆ ಹೊರಟಿದ್ದ ವಿಮಾನ ನಿಯಂತ್ರಣ ಕಳೆದುಕೊಂಡು ನಾಲ್ಕು ಗಂಟೆಗಳ ಕಾಲ ಆಗಸದಲ್ಲೆ ಚಕ್ಕರ್ ಹೊಡೆದು ಕೊನೆಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿರುವ ಘಟನೆ ನಡೆದಿದೆ.
ಏರ್ಲೈನ್ಸ್ IC3401 (ATRTURBOPROP AT7) ಸಂಖ್ಯೆ ಫ್ಲೈಟ್ ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಸಂಜೆ 4:30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ ಕಳೆದುಕೊಂಡಿತು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ಸುಮಾರು ನಾಲ್ಕು ಗಂಟೆ ಆಗಸದಲ್ಲಿಯೇ ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಟ ನಡೆಸಿದೆ. ಎಲ್ಲಿಯೂ ಫ್ಲೈಟ್ ಲ್ಯಾಂಡ್ ಆಗಲಿಲ್ಲ. ಕೊನೆಗೆ ಸಂಜೆ 7:30 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿದೆ.

ಇದರಿಂದ ಕಂಗಾಲಾದ ಪ್ರಯಾಣಿಕರು, ಫ್ಲೈಟ್ನಲ್ಲಿಯೇ ದೇವರಿಗೆ ಕೈಮುಗಿದು ಬೇಡಿಕೊಂಡು ಕಣ್ಣೀರಿಟ್ಟಿದ್ದರು. 4 ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಕರು ವಿಮಾನದಲ್ಲಿದ್ದರು. ನಾವಿನ್ನು ಜೀವಂತವಾಗಿ ಬರೋದು ಅನುಮಾನ ಅಂತ ಕುಟುಂಬಸ್ಥರಿಗೆ ಮೊಬೈಲ್ನಲ್ಲಿ ಸಂದೇಶ ಕಳುಹಿಸಿದ್ದರು.
ಏರ್ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ಅಸಮಾಧಾನಗೊಂಡಿದ್ದರು. ಫ್ಲೈಟ್ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಕಿಡಿಕಾರಿದ್ದರು.


