*33% ಮೀಸಲು ವಿಧೇಯಕದ ಸೋಲಿಗೆ ಕಾಂಗ್ರೆಸ್ ಕಾರಣ: ಜೆಡಿಎಸ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆಯರಿಗೆ ಶೇ. 33ರಷ್ಟು ಮೀಸಲು ನೀಡಲು ವಿಧೇಯಕದ ಸೋಲಿಗೆ ಕಾಂಗ್ರೆಸ್ ಪಕ್ಷ ಪ್ರಮುಖ ಕಾರಣ ಎಂದು ಆರೋಪಿಸಿ ಜೆಡಿಎಸ್ ವತಿಯಿಂದ ಬೆಳಗಾವಿ ನಗರದಲ್ಲಿ ಪ್ರತಿಭಟಿಸಲಾಯಿತು.
ಪ್ರತಿಭಟಿಸುವ ಮೂಲಕ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ನಗರದ ಕನ್ನಡ ಸಾಹಿತ್ಯ ಭವನದಿಂದ ಪ್ರತಿಭಟನೆ ಆರಂಭವಾಗಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡಲು ವಿಧೇಯಕವನ್ನು ಲೋಕಸಭೆಯಲ್ಲಿ ಸರಕಾರ ಮಂಡಿಸಿದ ಬಿಲ್ ಪ್ರತಿ ಪಕ್ಷಗಳ ವಿರೋಧದಿಂದ 2/3 ರಷ್ಟು ಬಹುಮತದ ಕೊರತೆಯಿಂದ ಬಿದ್ದು ಹೋಯಿತು. ಮಹಿಳೆಯರಿಗೆ ಸಿಗಬೇಕಾದ ಹಕ್ಕು ನೀಡಲು ಪ್ರತಿ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪಕ್ಷ ವಿಧೇಯಕದ ಸೋಲಿಗೆ ಪ್ರಮುಖ ಕಾರಣವಾಗಿದೆ. ಈ ವಿಧೇಯಕದ ಸೋಲನ್ನು ವಿಜಯೋತ್ಸವವನ್ನಾಗಿ ಆಚರಿಸುವ ವಿರೋಧ ಪಕ್ಷಗಳ ನೀತಿ ಖಂಡನೀಯವಾದದ್ದು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ವೇಳೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಜೆಡಿಎಸ್ ಮುಖಂಡರಾದ ಬಿ.ಎಸ್. ರುದ್ರಗೌಡರ, ಈರಣ್ಣ ರೇವಡಿ, ಪ್ರತಾಪರಾವ್ ಪಾಟೀಲ, ಅಶೋಕ ಪಾಟೀಲ, ಸೌರಭ ಚೋಪ್ರಾ, ನಾಶಿರ ಭಗವಾನ, ಮಾರುತಿ ಅಷ್ಟಗಿ ಸೇರಿದಂತೆ ಇತರರು ಇದ್ದರು.
