*ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ಮತ್ತೋರ್ವ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣದ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿಯೂ ಅಂತದ್ದೇ ಘಟನೆ ನಡೆದಿದೆ. ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ ಎನ್ನಲಾಗಿದೆ.
ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕು ನಂದಿ ಕ್ರಾಸ್ ಸಮೀಪದ ನಾಗಾರ್ಜುನ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿದ್ಯಾರ್ಥಿ, ಆತನ ತಾಯಿ ಸೇರಿದಂತೆ ಇಡೀ ಬ್ರಾಹ್ಮಣ ಸಮುದಾಯ ಘಟನೆ ಖಂಡಿಸಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಚಿಂತಾಮಣಿ ನಗರದ ವಿದ್ಯಾರ್ಥಿ ಸುಪ್ರೀತ್ ಏಪ್ರಿಲ್ 23 ರಂದು ಪರೀಕ್ಷೆ ಬರೆಯಲು ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್ಗೆ ತಾಯಿ ವಾಣಿ ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾರ್ಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ಕತ್ತರಿಸಿದ್ದಾರೆ. ಜನಿವಾರ ಕತ್ತರಿಸಿದರಿಂದ ವಿಚಲಿತನಾಗಿರುವ ಪುತ್ರ ವಿಚಲಿತನಾಗಿ ಆತಂಕ ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ ಇಲ್ಲವೇ ಗ್ರೇಸ್ ಅಂಕ ನೀಡಿ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಅತನಾಡಿರುವ ವಿದ್ಯಾರ್ಥಿ ಸುಪ್ರಿತ್, ನಾನು ಜನಿವಾರ ತೆಗೆದಿಟ್ಟುಕೊಳ್ಳುತ್ತೇನೆ ಎಂದರೂ ಸಿಬ್ಬಂದಿ ಅವಕಾಶ ನೀಡಲಿಲ್ಲ. ಜನಿವಾರವನ್ನು ಕತ್ತರಿಯಿಂದ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದರು. ಪರೀಕ್ಷೆ ಮುಗಿದ ಬಳಿಕ ಕಸದ ಬುಟ್ಟಿಯಲ್ಲಿ ಜನಿವಾರ ಹುಡುಕಿ ತಂದಿದ್ದೆನೆ. ಎಂಟು ದಿನಗಳ ಹಿಂದಷ್ಟೇ ಉಪನಯನವಾಗಿತ್ತು. ಇದ್ದಕ್ಕಿದ್ದಂತೆ ಜನಿವಾರ ಕತ್ತರಿಸಿದ್ದರಿಂದ ವಿಚಲಿತನಾಗಿ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

