*ಹೆಚ್ಚಿನ ಬಡ್ಡಿ ನೀಡುವುದಾಗಿ ಹಣ ಸಂಗ್ರಹಿಸಿರುವ ಆರೋಪ: ಶಿವಾನಂದ ನೀಲಣ್ಣವರ್ ಕಚೇರಿ ಮೇಲೆ ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸೈನಿಕರು ಹಾಗೂ ಸಾರ್ವಜನಿಕರಿಂದ, ಹೆಚ್ಚಿನ ಬಡ್ಡಿ ನೀಡುವುದಾಗಿ ಹಣ ಸಂಗ್ರಹಿಸಿ ಸಾವಿರಾರು ಕೋಟಿ ರೂಪಾಯಿ ಹಣ ದುರುಪಯೋಗ ಮಾಡಿರುವ ಸಂಶಯದ ಮೇಲೆ ಶಿವಾನಂದ ನೀಲಣ್ಣವರ್ಗೆ ಸೇರಿದ ಶಿವಂ ಅಸೋಸಿಯೇಟ್ನ ಎರಡು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಳಗಾವಿಯ ಶಿವ ಬಸವ ನಗರದಲ್ಲಿ ಇರುವ ಕಚೇರಿಯ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರಮಣ ನಾಯಕ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವಾನಂದ ನೀಲಣ್ಣವರ್ ವಿಡಿಯೋ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕ್ ಇವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ. 2028ಕ್ಕೆ ಒಂದೇ ಸಲ 224 ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದೆಲ್ಲ ಕಡೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದ ವಿಡಿಯೋ ವೈರಲ್ ಆಗಿವೆ.
ಇದೆ ಮೇ 17ರಂದು ಸ್ವಚ್ಛ ಬೆಳಗಾವಿ ಕಾರ್ಯಕ್ರಮ ಕೂಡ ಆಯೋಜನೆ ಮಾಡಿದ್ದರು. ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಸ್ವಚ್ಛ ಬೆಳಗಾವಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 20 ಸಾವಿರ ಜನರನ್ನು ಸೇರಿಸಿ ಸ್ವಚ್ಛ ಬೆಳಗಾವಿ ಮಾಡೋ ಉದ್ದೇಶ ಕೂಡ ಹೊಂದಿದ್ದರು. ಸದ್ಯ ಅಧಿಕಾರಿಗಳು ಅಗತ್ಯ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಶಿವಾನಂದ ನೀಲಣ್ಣನವರ್ಗೆ ಸೇರಿದ ಶಿವಂ ಅಸೋಸಿಯೇಟ್ನ ಎರಡು ಕಚೇರಿ ಮೇಲೆ ದಾಳಿ ನಡೆಯುತ್ತಿದಂತೆ ಜನ ಜಮಾಯಿಸುತ್ತಿದ್ದಾರೆ. ಪೊಲೀಸರಿಂದ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ.




