
ಪ್ರಗತಿವಾಹಿನಿ ಸುದ್ದಿ: ಸಿದ್ದರಾಮಯ್ಯ ಅವರ ರಾಜೀನಾಮೆಯಿಂದಾಗಿ 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಬಲವಾದ ಕಾರಣವಿಲ್ಲದೆಯೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಈ ನಡವಳಿಕೆಯಿಂದಾಗಿ ಇಡೀ ಕುರುಬ ಸಮಾಜ ತೀವ್ರ ಆಕ್ರೋಶಗೊಂಡಿದೆ. ಹಿಂದುಳಿದ ವರ್ಗದ ಪ್ರಮುಖ ಸಮುದಾಯಕ್ಕೆ ಕಾಂಗ್ರೆಸ್ ಮಾಡಿರುವ ಈ ಅನ್ಯಾಯದ ಲಾಭಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಸಿಗುವುದು ನಿಶ್ಚಿತ ಎಂದಿದ್ದಾರೆ.
ಪ್ರಚಾರದ ವೇಳೆ ಹಿಂದುಳಿದ ವರ್ಗಗಳ ಪರವಾಗಿ ಸದಾ ಧ್ವನಿ ಎತ್ತುವ ರಾಹುಲ್ ಗಾಂಧಿ ಅವರ ನಿಲುವು ಈಗ ಎಲ್ಲಿದೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ನಿರ್ಗಮನದಿಂದ ದಲಿತರಿಗೂ ಅನ್ಯಾಯವಾಗಿದೆ ಎಂದರು.
ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಮುಸ್ಲಿಂ ಸಮುದಾಯದ ಅತಿಯಾದ ಓಲೈಕೆ ರಾಜಕಾರಣ ಮಾಡಿದರು. ಕೊನೆ ಗಳಿಗೆಯಲ್ಲೂ ಮುಸ್ಲಿಂ ಸಮುದಾಯಕ್ಕೆ ಮೊದಲ ಆದ್ಯತೆ ಎಂದು ಘೋಷಿಸಿ ಹೋದರು.
ಆದರೆ ಇಂದು ಅವರ ರಾಜೀನಾಮೆ ಸಂದರ್ಭದಲ್ಲಿ ಯಾವೊಬ್ಬ ಮುಸ್ಲಿಂ ನಾಯಕನೂ ಅವರ ಪರವಾಗಿ ನಿಂತು ಪ್ರತಿಭಟನೆಯಾಗಲಿ, ವಿರೋಧವಾಗಲಿ ವ್ಯಕ್ತಪಡಿಸಿಲ್ಲ ಎಂದರು.




