*ಒಂದೇ ಮಳೆಗೆ ಬೈಲಹೊಂಗಲದಲ್ಲಿ 8 ಮನೆಗಳು ನೆಲ ಸಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ಬೈಲಹೊಂಗಲ ಪಟ್ಟಣದ ವ್ಯಾಪರಸ್ಥರು ವರುಣಾರ್ಭಟಕ್ಕೆ ಹೈರಾಣಾಗಿ ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಲ್ಮಠ ಓಣಿಯಲ್ಲಿ ಮಳೆರಾಯ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ವರುಣಾರ್ಭಟಕ್ಕೆ ಒಂದೇ ಕಡೆ ಬರೋಬ್ಬರಿ 8 ಮನೆಗಳು ಧರೆಗುರುಳಿದ್ದು, ಅದೃಷ್ಟವಶಾತ್ 8 ಮನೆಗಳಲ್ಲಿದ್ದ ಜನ ಪವಾಡ ರೀತಿ ಪಾರಾಗಿದ್ದಾರೆ.
ಇಲ್ಲಿ ಬಾಡಿಗೆಗೆ ಇದ್ದ ಜನರೆಲ್ಲರೂ ಕೂಲಿಕಾರ್ಮಿಕರು. ಬಟ್ಟೆ, ದವಸ ಧಾನ್ಯ, ದಾಖಲೆಗಳು, ಹಣ ಎಲ್ಲವೂ ಈಗ ಮಣ್ಣುಪಾಲಾಗಿದೆ.
ಬೈಲಹೊಂಗಲ ಪಟ್ಟಣದ ಬಜಾರ್ ಗಲ್ಲಿಯ 50ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜೊತೆಗೆ ಕಲ್ಮಠ ನಗರದಲ್ಲಿ ಒಂದೇ ಕಡೆಯಲ್ಲಿ ಎಂಟು ಮನೆಗಳು ಬಿದ್ದಿವೆ.
ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ನಡೆದಿದೆ. ಇನ್ನು, ಈಶ್ವರ ನಗರದಲ್ಲಿ ಎಪಿಎಂಸಿಯ ಗೋಡೆ ಕುಸಿತಗೊಂಡು ಎರಡು ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಬೈಲಹೊಂಗದಲ್ಲಿ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಮಳೆ ಹಾನಿ ಪ್ರದೇಶಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಭೇಟಿ ನೀಡದ ಹಿನ್ನೆಲೆಯಲ್ಲಿ ವ್ಯಾಪರಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಉಟ್ಟ ಬಟ್ಟೆ ಬಿಟ್ಟು ಎಲ್ಲವನ್ನೂ ಕಳೆದುಕೊಂಡ ಜನ ಬೀದಿಗೆ ಬಿದ್ದಿದ್ದು, ತಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.




